ADVERTISEMENT

ಮೊದಲ ಪಿಚ್‌ನ ಸಂಭ್ರಮ

ಹೊಸ ಕ್ಯುರೇಟರ್‌ ಶ್ರೀರಾಮ್‌ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 4:02 IST
Last Updated 14 ಡಿಸೆಂಬರ್ 2013, 4:02 IST

ಹುಬ್ಬಳ್ಳಿ: ಕೆಎಸ್‌ಸಿಎಗೆ ಹೊಸ ಆಡಳಿತ ಮಂಡಳಿ ಆಯ್ಕೆಯಾದ ನಂತರ ನೇಮಕಗೊಂಡ ಕ್ಯುರೇಟರ್‌ ತಯಾರು ಮಾಡಿದ ಮೊದಲ ಪಿಚ್‌ ಹುಬ್ಬಳ್ಳಿ ರಾಜನಗರ ಮೈದಾನದ್ದು.

ಕೆಎಸ್‌ಸಿಎ ಮೈದಾನಗಳ ಪಿಚ್‌ ಕ್ಯುರೇಟರ್‌ ಆಗಿದ್ದ ನಾರಾಯಣ ರಾಜು ಅವರ ಸ್ಥಾನವನ್ನು ಈಗ ಕೆ.ಶ್ರೀರಾಮ್‌ ವಹಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ಪಿಚ್‌ಗಳನ್ನು ತಯಾರು ಮಾಡಿದ್ದರೂ ಹೊರಭಾಗ­ದಲ್ಲಿ, ಪೂರ್ಣಪ್ರಮಾಣದ ಕ್ಯರೇಟರ್‌ ಆಗಿ ಪಿಚ್‌ ಒಂದನ್ನು ಸಿದ್ಧಗೊಳಿಸಿದ್ದು ಇದೇ ಮೊದಲು.

ಎರಡು ದಿನಗಳ ಹಿಂದೆ ಇಲ್ಲಿಗೆ ಬಂದು ಸ್ಥಳೀಯ ಕ್ಯುರೇಟರ್‌ ಶಿವಾ­ನಂದ ಗುಂಜಾಳ ತಂಡಕ್ಕೆ ಸಲಹೆ ಸೂಚನೆಗಳನ್ನು ನೀಡಿ ಹೋದ ಶ್ರೀರಾಂ ಕರ್ನಾಟಕ ರಣಜಿ ತಂಡದ ಮಹತ್ವದ ಪಂದ್ಯವೊಂದಕ್ಕೆ ಪಿಚ್‌ ಸಿದ್ಧಗೊಳಿಸಿದ ಖುಷಿಯಲ್ಲಿದ್ದಾರೆ. ಮುಂಬೈ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಕ್ಕೆ ಪಿಚ್‌ ಸಿದ್ಧಪಡಿಸುವ ಕೆಲಸದಲ್ಲಿ ಈಗ ತೊಡಗಿಸಿಕೊಂಡಿ­ದ್ದಾರೆ; ಕ್ಯೂರೇಟರ್‌ ಆಗಿ ಹೆಸರು ಮಾಡಿದ್ದ ಜಿ.ಕಸ್ತೂರಿ ರಂಗನ್‌ ಅವರ ಪುತ್ರನೂ ಆಗಿರುವ ಶ್ರೀರಾಂ.

ಹುಬ್ಬಳ್ಳಿಯಲ್ಲಿ ಪಿಚ್‌ ಸಿದ್ಧಗೊಳಿಸಿದ ಕುರಿತು ಶುಕ್ರವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಶ್ರೀರಾಂ ‘ಇದು ಸಂಭ್ರಮದ ಕ್ಷಣ. ನಾನು ಸಿದ್ಧ ಮಾಡಿದ ಪಿಚ್‌ನಲ್ಲಿ ನಾಳೆಯಿಂದ ದೊಡ್ಡ ಪಂದ್ಯವೊಂದು ನಡೆಯುತ್ತಿದೆ.

ಅನೇಕ ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಈಗ ಸರಿಯಾದ ಗೌರವ ಸಿಕ್ಕಂತಾಗಿದೆ. ಕೆಎಸ್‌ಸಿಎ ಹೊಸ ಆಡಳಿತ ಮಂಡಳಿ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್ ಇದಕ್ಕೆ ಕಾರಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.