ಹುಬ್ಬಳ್ಳಿ: ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಮ್ಯಾನ್ ಹೋಲ್ಗಳು ಬಾಯಿಬಿಟ್ಟಿವೆ. ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಇಂಥದ್ದೇ ಸ್ಥಿತಿ ನೆಹರೂ ಕ್ರೀಡಾಂಗಣ ಪಕ್ಕದಲ್ಲಿ ಹಾದು ಹೊಗುವ ರಸ್ತೆಯಲ್ಲಿರುವ ಮ್ಯಾನ್ಹೋಲ್ ಒದಗಿದೆ. ಮ್ಯಾನ್ ಹೋಲ್ ಸಂಪೂರ್ಣ ಕುಸಿದು ಹೋಗಿದೆ. ಅಪಾಯಕಾರಿ ಸ್ಥಿತಿಯಲ್ಲಿದ್ದು, ಆ ಅವ್ಯವಸ್ಥೆಯ ಮಧ್ಯೆಯೇ ವಾಹನ ಸವಾರರು, ಪಾದಚಾರಿಗಳು ಓಡಾಡುವಂತಾಗಿದೆ. ಅದರ ದುರಸ್ತಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಅಲ್ಲಿನ ನಿವಾಸಿಗಳು
ಡಾಂಬರೀಕರಣ ಸಂದರ್ಭದಲ್ಲಿ ಒಮ್ಮೆ ರಸ್ತೆ ಅಗೆಯಲಾಗಿತ್ತು. ಅದು ಬೇಗನೇ ಕಿತ್ತು ಹೋಯಿತು. ಒಳಚರಂಡಿ ನಿರ್ಮಾಣಕ್ಕಾಗಿ ಮತ್ತೆ ಅಗೆದರು. ಈಗ ಮ್ಯಾನ್ಹೋಲ್ ಹಾಳಾಗಿದೆ. ಒಮ್ಮೊಮ್ಮೆ ಅದು ತುಂಬಿ ಹರಿಯುವುದರಿಂದ ದುರ್ವಾಸನೆಯ ನಡುವೆಯೇ ಇರಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಪಾಲಿಕೆಗೆ ದೂರು ನೀಡಿದ ಮೇಲೆ ಮ್ಯಾನ್ಹೋಲ್ನ ತ್ಯಾಜ್ಯ ತೆಗೆದು ಹಾಕಲಾಗಿತ್ತು. ಈಗ ಮತ್ತೇ ಆ ಸಮಸ್ಯೆ ಎದುರಾಗಿದೆ. ಮ್ಯಾನ್ ಹೋಲ್ ಕುಸಿದು ತೆಗ್ಗಾಗಿದೆ. ಅದರ ಸುತ್ತ ಕಬ್ಬಿಣದ ರಾಡ್ಗಳು ಕಾಣಿಸಿಕೊಂಡಿವೆ. ರಾತ್ರಿ ವೇಳೆ ಕಾಣುವುದಿಲ್ಲ. ಆದ್ದರಿಂದ ಹಲವಾರು ಜನರು ಬಿದ್ದು ಗಾಯಗೊಂಡಿದ್ದಾರೆ’ ಎಂದು ಸ್ಥಳೀಯ ನಿವಾಸಿ ವಿನಾಯಕ ಪವಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
’ಮ್ಯಾನ್ಹೋಲ್ ಹಾಳಾಗಿರುವ ಬಗ್ಗೆ ಒಂದು ಫಲಕವನ್ನಾದರೂ ಹಾಕಿಲ್ಲ. ಸ್ಮಾರ್ಟ್ ಸಿಟಿ ಆಗದಿದ್ದರೂ ಪರವಾಗಿಲ್ಲ ಕನಿಷ್ಠ ಮೂಲ ಸೌಕರ್ಯ ಒದಗಿಸಿಕೊಡಬೇಕು’ ವಿನಾಯಕ ಪವರ್ ಮನವಿ ಮಾಡಿದರು.
‘ಮಳೆ ಬಂದರೆ ತ್ಯಾಜ್ಯ ಅಂಗಡಿಗಳಒಳಗೂ ಬರುತ್ತದೆ. ಕೆಲವೊಮ್ಮೆ ಅಂಗಡಿಗಳನ್ನೇ ಬಂದ್ ಮಾಡಬೇಕಾಗುತ್ತದೆ. ಪಾಲಿಕೆಯ ಬೇಜವಾಬ್ದಾರಿತನದಿಂದ ನಿತ್ಯ ತೊಂದರೆ ಎದುರಿಸುವಂತಾಗಿದೆ’ ಎಂದು ನಾಗರಾಜ ದೂರಿದರು.
**
ಚುನಾವಣೆ ಇದ್ದ ಕಾರಣ ವಾರ್ಡ್ನಲ್ಲಿ ಸಂಚರಿಸಲು ಸಾಧ್ಯವಾಗಿರಲಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ್ದೇನೆ. ಶೀಘ್ರದಲ್ಲೇ ಪರಿಹರಿಸಲಾಗುತ್ತದೆ
- ಸ್ಮಿತಾ ಜಾಧವ್, ಪಾಲಿಕೆ ಸದಸ್ಯೆ
-ಸಬೀನಾ ಎ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.