ADVERTISEMENT

ರಂಗಭೂಮಿಯ ಶಕ್ತಿ ಕುಂದಿಲ್ಲ: ಉಡಿಕೇರಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 10:17 IST
Last Updated 29 ಮಾರ್ಚ್ 2018, 10:17 IST
ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಕಲಾವಿದರಾದ ಸನ್ಮತಿ ಅಂಗಡಿ, ಸಂತೋಷ ಮಹಾಲೆ ಮತ್ತು ಸಿ.ಎಸ್.ಪಾಟೀಲಕುಲಕರ್ಣಿ ಅವರನ್ನು ಗೌರವಿಸಲಾಯಿತು.
ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಕಲಾವಿದರಾದ ಸನ್ಮತಿ ಅಂಗಡಿ, ಸಂತೋಷ ಮಹಾಲೆ ಮತ್ತು ಸಿ.ಎಸ್.ಪಾಟೀಲಕುಲಕರ್ಣಿ ಅವರನ್ನು ಗೌರವಿಸಲಾಯಿತು.   

ಧಾರವಾಡ: ‘ಸಮಾಜದ ವಿವಿಧ ಹಂತಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಸಮಾಧಾನ ಒದಗಿಸುವ ಶಕ್ತಿ ರಂಗಭೂಮಿಗಿದೆ. ಸಮ ಸಮಾಜದ ನಿರ್ಮಾಣದಲ್ಲಿ ರಂಗಭೂಮಿಯ ಪಾತ್ರ ಅನನ್ಯವಾದುದು’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಅಭಿಪ್ರಾಯಪಟ್ಟರು.

ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಸಮುದಾಯ ಸಂಘಟನೆ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಏರ್ಪಡಿಸಿದ್ದ ಕಲಾವಿದರಿಗೆ ಸನ್ಮಾನ, ನಾಟಕ ಮತ್ತು ನೃತ್ಯ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ಸಮಾಜದ ಓರೆ–ಕೋರೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಾಟಕದ ಮೂಲಕ ಪ್ರತಿಫಲಿಸಬಹುದು. ಅಲ್ಲದೇ ನಾಟಕದ ಮೂಲಕ ಪ್ರೇಕ್ಷಕರನ್ನು ಜಿಜ್ಞಾಸೆಗೆ ಒಳಪಡಿಸಿ, ಆಲೋಚನೆ ಮಾಡಲು ಹಚ್ಚುವ ಶಕ್ತಿ ರಂಗಭೂಮಿಗಿದೆ. ಇತ್ತೀಚಿಗ ದಿನಗಳಲ್ಲಿ ಮಾಧ್ಯಮಗಳ ಪ್ರಭಾವ
ದಿಂದ ರಂಗ ಚಟುವಟಿಕೆಗಳು ಕಡಿಮೆಯಾಗುತ್ತಿದ್ದರೂ, ರಂಗಭೂಮಿಯ ಶಕ್ತಿ ಕುಂದಿಲ್ಲ’ ಎಂದರು.

ADVERTISEMENT

’ಒಂದು ಕಾಲದಲ್ಲಿ ಮನರಂಜನೆಯ ಮಾಧ್ಯಮವಾಗಿದ್ದ ರಂಗಭೂಮಿ ಕಾಲಾನುಕ್ರಮದಲ್ಲಿ ವೈವಿಧ್ಯಮಯ ಪ್ರಯೋಗಗಳ ಮೂಲಕ ವೈಚಾರಿಕ ಚಿಂತನೆಗೂ ದಾರಿ ಮಾಡಿಕೊಟ್ಟಿದೆ. ರಂಗಭೂಮಿಯ ಸ್ಥಿತಿ–ಗತಿ, ರಂಗಭೂಮಿಯ ಮುಂದಿರುವ ಸವಾಲುಗಳು ಸೇರಿದಂತೆ ಇನ್ನಿತರ ವಿಷಯಗಳ ಚರ್ಚೆಗೆ ಅವಕಾಶವಾಗಬೇಕು’ ಎಂದು ಅವರು ಹೇಳಿದರು.

ಸಾಹಿತಿ ನಿಂಗಣ್ಣ ಕುಂಟಿ ಮಾತನಾಡಿ, ‘ಸಮುದಾಯ ಸಂಘಟನೆ ಹಲವು ದಶಕಗಳಿಂದ ರಂಗಭೂಮಿಯ ಮೂಲಕ ಸಮಾಜದ ಸಮಸ್ಯೆಗಳನ್ನು ಅನಾವರಣಗೊಳಿಸುವ ಪ್ರಯತ್ನ ಮಾಡುತ್ತ ಬಂದಿದೆ. ರಂಗ ಚಟುವಟಿಕೆಗಳನ್ನು ನಡೆಸುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ತೊಡಗಿಕೊಳ್ಳಲಿ’ ಎಂದು ಹಾರೈಸಿದರು.

ಗಂಗಾಧರ ಗಾಡದ, ಎಸ್‌.ಎಸ್.ಚಿಕ್ಕಮಠ, ಇಸಬೆಲ್ಲಾ ಝೇವಿಯರ್, ಜಯಶ್ರೀ ಗವಳಿ, ಬಿ.ಐ. ಈಳಿಗೇರ ಇದ್ದರು.ಇದೇ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಸನ್ಮತಿ ಅಂಗಡಿ, ಸಿ.ಎಸ್‌.ಪಾಟೀಲ ಕುಲಕರ್ಣಿ ಮತ್ತು ಸಂತೋಷ ಮಹಾಲೆ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.