ADVERTISEMENT

ವೀರೇಶ್ವರ ಶರಣರ ಪ್ರವಚನ ಆರಂಭ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 8:15 IST
Last Updated 23 ಜುಲೈ 2012, 8:15 IST

ಅಮ್ಮಿನಭಾವಿ: `ಧರ್ಮದ ಆಚರಣೆ, ಅದರ ವಿಶ್ಲೇಷಣೆಯಲ್ಲಿ ತಪ್ಪಿರುವ ಜನಮಾನಸವು ತೀವ್ರ ಗೊಂದಲದಲ್ಲಿದೆ. ಧರ್ಮವೆಂದರೆ ಜಾತಿಯಲ್ಲ; ಅದು ನೀತಿಪೂರ್ಣವಾದ ಜೀವನ ವಿಧಾನವಾಗಿದೆ~ ಎಂದು ಅಮ್ಮಿನಭಾವಿ ಪಂಚಗಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ನಾಲತವಾಡದ ಶ್ರೀವೀರೇಶ್ವರ ಶರಣರ ಪುರಾಣ ಪ್ರವಚನ ಉದ್ಘಾಟಿಸಿ ಮಾತನಾಡಿದರು.

ಧರ್ಮವನ್ನು ಜಾತಿ ಸೂಚಕವಾಗಿ ಪರಿಗಣಿಸುವ ಮೂಲಕ ಇಂದು ಅನೇಕ ದ್ವಂದ್ವ-ಗೊಂದಲಗಳಲ್ಲಿ ಮುಳುಗಿ ಹೋಗಿರುವ ಜನತೆ, ಧರ್ಮದ ವಿಶಾಲ ಅರ್ಥವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಧರ್ಮದ ನೀತಿ-ನಿರೂಪಣೆಯ ಸಂಸ್ಕಾರವೊಂದರಿಂದಲೇ ಮನುಷ್ಯ ಎಲ್ಲ ಪ್ರಾಣಿ-ಪಕ್ಷಿ-ಜೀವರಾಶಿಗಳಿಂದ ಭಿನ್ನವಾಗಿದ್ದಾನೆ. ಶ್ರಾವಣ ಮಾಸದ ಪವಿತ್ರ ಆಚರಣೆಗಳ ಮೂಲಕ ಮನುಷ್ಯ ಶರಣ-ಸಂತ-ಮಹಾಂತರ ಆದರ್ಶಪೂರ್ಣವಾದ ಜೀವನ ವಿಧಾನಗಳನ್ನು ಅರಿಯುವಲ್ಲಿ ಆಸಕ್ತಿವಹಿಸಬೇಕು ಎಂದೂ ಅವರು ನುಡಿದರು.

ADVERTISEMENT

ಪುರಾಣ ಪ್ರವಚನ ಉದ್ಘಾಟನಾ ಸಮಾರಂಭದ ನೇತೃತ್ವವನ್ನು ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ಅಮ್ಮಿನಭಾವಿ ಗ್ರಾ.ಪಂ. ಉಪಾಧ್ಯಕ್ಷ ಸುನೀಲ ಗುಡಿ, ಪ್ರಗತಿಪರ ಕೃಷಿಕ ಶಿವಪ್ಪಣ್ಣ ಕುಸುಗಲ್ಲ, ಮಡಿವಾಳಪ್ಪ ಅಮರಶೆಟ್ಟಿ, ಬಸವರಾಜ ಕೊಳ್ಳಿ, ಹುಲೆಪ್ಪ ಜೀವಾಪೂರ, ಚಂಬಣ್ಣ ಉಂಡೋಡಿ, ನಿವೃತ್ತ ಶಿಕ್ಷಕರಾದ ವಿ.ಬಿ.ಕೆಂಚನಗೌಡರ ಹಾಗೂ ಎನ್.ಸಿ.ಪಾಟೀಲ, ಶಿವಪ್ಪ ಹೂಲಿ, ಚಂದ್ರು ಶೆಟ್ಟರ ಪುಷ್ಪನಮನ ಸಲ್ಲಿಸಿದರು. ವೇದಮೂರ್ತಿ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಅವರ ವೇದಘೋಷದ ನಂತರ ವಿನಾಯಕ ಹಿರೇಮಠ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ವಂದಿಸಿದರು. ಗಾಯಕ ಗುರುಸಿದ್ಧಯ್ಯ ಸವದಿಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಡಿವಾಳಯ್ಯ ಶಹಪೂರಮಠ ತಬಲಾ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.