ಕಳಸ (ಕುಂದಗೋಳ): ‘ಮನುಷ್ಯ ಒಳ್ಳೆ ಕಾರ್ಯಗಳಿಗೆ ಹೆಮ್ಮೆ ಪಡಬೇಕು. ಗುರು ಗೋವಿಂದ ಭಟ್ಟರು ಸಮಾಜಕ್ಕೆ ಬೆಳಕಾಗಿದ್ದಾರೆ. ಜಾತಿ, ವೈಷಮ್ಯದಿಂದ ದೂರವಿದ್ದು ಆತ್ಮೀಯತೆ ಭಾವ ಮೂಡಿಸಿಕೊಂಡವರು ಇವರು. ಹೀಗಾಗಿ ಮನು ಕುಲ ಒಂದಾಗಿರಬೇಕು’ ಎಂದು ಹತ್ತಿಮತ್ತೂರಿನ ನಿಜಗುಣ ಶಿವಯೋಗಿಗಳು ಹೇಳಿದರು.
ಗ್ರಾಮದ ಗುರು ಗೋವಿಂದ ಭಟ್ಟರ ದೇವಸ್ಥಾನದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಗುರು ಗೋವಿಂದ ಭಟ್ಟರ ಸೇವಾ ಸಮಿತಿ ಆಶ್ರಯದಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಅನುಭಾವ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ನಮ್ಮನ್ನು ನಾವು ಅರಿತುಕೊಳ್ಳಬೇಕು. ವ್ಯಾಮೋಹದಿಂದ ದೂರವಿದ್ದು ನಮ್ಮ ಬದುಕಿನಲ್ಲಿ ಬೆಳಕನ್ನು ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸಿ ಕಾರ್ತಿಕ ದೀಪವನ್ನು ಹಚ್ಚಬೇಕು’ ಎಂದರು.
ಮುಖ್ಯ ಅತಿಥಿಗಳಾಗಿ ಗುರುಸ್ವಾಮಿ ಬಾಳಿಹಳ್ಳಿಮಠ, ಎಸ್.ಎನ್. ಸುರಗಿಮಠ ಮತ್ತಿತರರು ಆಗಮಿಸಿದ್ದರು. ಸಾನಿಧ್ಯ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ವಹಿಸಿದ್ದರು. ಅಧ್ಯಕ್ಷತೆ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ಡಿ. ಘೋರ್ಪಡೆ ವಹಿಸಿದ್ದರು.
ಜನಪದ ಸೇವೆಗಾಗಿ ಎಸ್.ಎಸ್. ಹಿರೇಮಠ, ವೀರೇಶ ಬಡಿಗೇರ, ಈಶ್ವರ ಅರಳಿ, ಪತ್ರಿಕಾ ಸೇವೆಗಾಗಿ ವೀರೇಶ ಪ್ರಳಯಕಲ್ಮಠ, ಸರ್ಕಾರಿ ಸೇವೆಗಾಗಿ ಎಸ್.ಎಸ್. ಕೆಳದಿಮಠ, ಸಮಾಜ ಸೇವೆಗಾಗಿ ಟಿ.ಈಶ್ವರ, ವಾದ್ಯ ಸೇವೆಗಾಗಿ ಹೇಮಂತಕುಮಾರ ಭಜಂತ್ರಿ, ವೈದ್ಯಕೀಯ ಸೇವೆಗಾಗಿ ಡಾ. ಆರ್.ಎ. ಅಳಗುಂಡಗಿ, ಸಾಹಿತ್ಯ ಸೇವೆಗಾಗಿ ಚಂದ್ರಶೇಖರ ಪಾಟೀಲ, ಉತ್ತಮ ಸಂಘಟನೆಗಾಗಿ ಸಿ.ಟಿ. ತಿಮ್ಮನಗೌಡ್ರ ಸೇರಿದಂತೆ ಒಟ್ಟು 12 ಜನರಿಗೆ ಸನ್ಮಾನ ಮಾಡಲಾಯಿತು. ಶಿಗ್ಗಾಂವ ತಾಲ್ಲೂಕಿನ ಬಾಡ ಗ್ರಾಮದ ಸಂತೋಷಕುಮಾರ ಸಿದ್ದಪ್ಪನವರ ಗೋವಿಂದ ಭಟ್ಟರ ಪಾತ್ರದಲ್ಲಿ, ಕಳಸ ಗ್ರಾಮದ ಕಲಂದರ ಮೀರಾನವರ ಶರೀಫ್ ಪಾತ್ರದಲ್ಲಿ ಮಿಂಚಿದರು. ಸುನಿತಾ ಪ್ರಾರ್ಥಿಸಿದರು. ಎಸ್.ಸಿ. ಶಾನವಾಡ ಸ್ವಾಗತಿಸಿದರು. ನಿಂಗಪ್ಪ ಕಳಸದ ನಿರೂಪಿಸಿದರು.
ಕಾರ್ತಿಕ ಮಹೋತ್ಸವ: ಪಟ್ಟಣದ ಕಲಾಲ ಓಣಿಯ ಮುಸ್ಲಿಂ ಬಾಂಧವರು ಅಗಸಿಗಟ್ಟಿ ದೇವಸ್ಥಾನದಲ್ಲಿ ಮಂಗಳವಾರ ಕಾರ್ತಿಕ ಮಹೋತ್ಸವ ಆಚರಿಸುವ ಮೂಲಕ ಭಾವೈಕ್ಯ ಮೆರೆದರು.
ಪೂಜಾರಿ ಮಾನಪ್ಪ ಬಡಿಗೇರ ದೇವಿಗೆ ಪೂಜೆ ಸಲ್ಲಿಸಿದರು. ಹಿಂದೂಗಳೊಂದಿಗೆ ಮುಸ್ಲಿಂ ಬಾಂಧವರೂ ದೀಪ ಹಚ್ಚುವ ಮೂಲಕ ಮಾದರಿಯಾದರು.
ಲಾಲಾಸಾಬ್ ಯಲಿಗಾರ, ಮುಕ್ತುಂಸಾಬ್ ಸುಂಕದ, ಅಲ್ಲಾಸಾಬ್ ಸುಂಕದ, ಅಲ್ಲಾಸಾಬ್ ಕಳ್ಳಿಮನಿ, ಹುಸೇನಸಾಬ್ ಬೂದಿಹಾಳ ಮತ್ತು ಸೋಮರಾವ್ ದೇಸಾಯಿ, ಜಗದೀಶ ಕಾಲವಾಡ, ವಿಶ್ವನಾಥ ಹಿರೇಮಠ, ಅರ್ಜುನ ಕಲಾಲ, ಪ್ರಭು ಹಡಪದ, ಬಿ.ಪಿ. ಅಂಗಡಿ, ಎ.ಬಿ. ಕುಂಬಾರ, ಎನ್.ಕೆ. ಗುಣಕಿ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.