ADVERTISEMENT

ಶಿಕ್ಷಕರಿಗೆ ರೈತರ ಬೆಂಬಲ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 6:40 IST
Last Updated 2 ಜನವರಿ 2012, 6:40 IST

ಧಾರವಾಡ: ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳ ಶಿಕ್ಷಕರ, ನೌಕರರ ಹಾಗೂ ಆಡಳಿತ ಮಂಡಳಿಗಳ ಸಂಘದಿಂದ ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ನಗರದಲ್ಲಿ ನಡೆಸುತ್ತಿರುವ ಧರಣಿ ಭಾನುವಾರ 18ನೇ ದಿನ ಪೂರೈಸಿದೆ.

ಮಾಜಿ ಸಚಿವ ಬಸವರಾಜ ಹೊರಟ್ಟಿ, ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಘಟಕದ ಸಂಚಾಲಕ ಬಿ.ಎಸ್. ಸೊಪ್ಪಿನ್ ಧರಣಿನಿತರನ್ನು ಭೇಟಿಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

`1987ರಿಂದ 1995ರ ಅವಧಿಯಲ್ಲಿ ಸ್ಥಾಪನೆಯಾದ ಶಾಲಾ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದ್ದರೂ ರಾಜ್ಯ ಸರ್ಕಾರ ಶೇ 60ರಷ್ಟು ಅನುದಾನ ಮಾತ್ರ ಬಿಡುಗಡೆ ಮಾಡಿದೆ~ ಎಂದು ಸೊಪ್ಪಿನ್ ಆಕ್ರೋಶ ವ್ಯಕ್ತಪಡಿಸಿದರು. ಉಳಿದ ಶೇ 40ರಷ್ಟು ಅನುದಾನ ನೀಡದಿರುವುದರಿಂದ ನೊಂದ ಶಿಕ್ಷಕರು ಸಂಬಳವಿಲ್ಲದೆ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ ಎಂದು ಅವರು ವಿಷಾದಿಸಿದರು.

ಎಲ್‌ಐಸಿ ಕಾರ್ಮಿಕರ ಸಂಘಟನೆ ಕಾರ್ಯದರ್ಶಿ ಬಿ.ಎನ್. ಪೂಜಾರ ಮಾತನಾಡಿ, ಮಠಮಾನ್ಯಗಳಿಗೆ ಬೇಕಾದಷ್ಟು ದುಡ್ಡು ನೀಡುವ ಸರ್ಕಾರ, ಶಾಲೆಗಳಿಗೆ ಅನುದಾನ ನೀಡದೆ ಶಿಕ್ಷಕರು ಬೀದಿಗಿಳಿಯುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿ.ಎಂ. ಹನಸಿ ಸಹ ಶಿಕ್ಷಕರನ್ನು ಬೆಂಬಲಿಸಿ ಮಾತನಾಡಿದರು.

`ಶಿಕ್ಷಕರು ಯಾವುದೇ ಒತ್ತಡಕ್ಕೆ ಒಳಗಾಗದೆ ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟವನ್ನು ಮುಂದುವರಿಸಬೇಕು. ಅವರ ಬೆಂಬಲಕ್ಕೆ ನಾವಿದ್ದೇವೆ~ ಎಂದು ಹೊರಟ್ಟಿ ಹೇಳಿದರು. ರೈತ ಹಾಗೂ ಶಿಕ್ಷಕರ ಸಂಘಟನೆಗಳ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.