ADVERTISEMENT

ಶುದ್ಧ ನೀರು ಎಲ್ಲರಿಗೂ ಸಿಗಲಿ: ಎಚ್.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 5:10 IST
Last Updated 18 ಆಗಸ್ಟ್ 2012, 5:10 IST

ನವಲಗುಂದ:  ಮಾಜಿ ಸಚಿವ ನಜೀರಸಾಬ್ ಹಳ್ಳಿ ಹಳ್ಳಿಗೆ ನೀರು ಕೊಟ್ಟು ನೀರುಸಾಬರಾದರೆ  ಎಚ್.ಕೆ.ಪಾಟೀಲರು ಶುದ್ಧ ಕುಡಿಯುವ ನೀರಿನ ಜನಾಂದೋಲನ ಪ್ರಾರಂಭಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆಂದು ರಾಜ್ಯ ತೋಟಗಾರಿಕೆ ಮಹಾಮಂಡಳದ ಅಧ್ಯಕ್ಷರಾದ ಈಶ್ವರಚಂದ್ರ ಹೊಸಮನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಜಿ.ಪಂ, ತಾ.ಪಂ, ಗ್ರಾ.ಪಂ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೆ.ಎಚ್.ಪಾಟೀಲ ಪ್ರತಿಷ್ಠಾನ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಸಹಯೋಗದಲ್ಲಿ ಏರ್ಪಡಿಸಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮಗಳಲ್ಲಿ ಅಶುದ್ಧ ನೀರು ಕುಡಿಯುತ್ತಿರುವುದರಿಂದ ಅನೇಕ ರೋಗ ರುಜಿನಗಳು ಉಂಟಾಗಿ ಸಂಪಾದಿಸಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗಿದೆ. ಎಚ್.ಕೆ ಪಾಟೀಲರು ಉತ್ತರ ಕರ್ನಾಟಕದಲ್ಲಿ ಶುದ್ಧ ಕುಡಿಯುವ ನೀರಿನ ಜನಾಂದೋಲನ ಪ್ರಾರಂಭಿಸಿದ್ದರಿಂದ ಗ್ರಾಮಸ್ಥರಿಗೆ ವರದಾನವಾಗಿದೆ. ಇಂತಹ ಕ್ರಾಂತಿಕಾರಕ ಯೋಜನೆಯನ್ನು ಪ್ರತಿ ಗ್ರಾಮದವರು ಅನುಷ್ಠಾನ ಮಾಡಿಕೊಂಡರೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಕೆ.ಎನ್ ಗಡ್ಡಿ ಹಾಗೂ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎನ್‌ಎಚ್. ಕೋನರಡ್ಡಿ ಮಾತನಾಡಿ ಮೊದಲು ಕೆರೆಗಳಲ್ಲಿ ಮಳೆ ನೀರು ಸಂಗ್ರಹಿಸುತ್ತಿದ್ದರಿಂದ ವರ್ಷಗಟ್ಟಲೇ ನೀರನ್ನು ಬಳಕೆ ಮಾಡಿದರೂ ಕಲುಷಿತಗೊಳ್ಳುತ್ತಿರಲಿಲ್ಲ. ಆದರೆ ಈಗ ಕಾಲುವೆಗಳ ಮೂಲಕ ಹರಿದು ಬರುವ ನೀರನ್ನು ಸಂಗ್ರಹಿಸುತ್ತಿರುವುದರಿಂದ ರೈತರು ಹೊಲಗಳಿಗೆ ಬಳಸುವ ಕ್ರೀಮಿನಾಶಕ, ರಸಗೊಬ್ಬರ ನೀರಿನ ಮೂಲಕ ಹರಿದು ಬಂದು ಕಲ್ಮಶಗೊಳ್ಳುತ್ತಿದೆ. ಇದರಿಂದಾಗಿ ರೋಗ ರುಜಿನಗಳಿಗೆ ತುತ್ತಾಗುತ್ತಿರುವುದು ಕಂಡುಬಂದಿದೆ. ಆದರೆ, ಈಗ ಎಚ್.ಕೆ.ಪಾಟೀಲರು ಅಧಿಕಾರ ಇಲ್ಲದಿದ್ದರೂ ಜನಪರ ಕಾಳಜಿ ಹೊಂದಿ ಅನುಷ್ಠಾನಗೊಳಿಸುತ್ತಿರುವ ಶುದ್ದ ಕುಡಿಯುವ ನೀರಿನ ಘಟಕದಿಂದಾಗಿ ಅತಿ ಕಡಿಮೆ ವೆಚ್ಚದಲ್ಲಿ ಜನಸಾಮಾನ್ಯರು, ರೈತರು ಫಿಲ್ಟರ್ ನೀರನ್ನು ಕುಡಿಯುವಂತಾಗಿರುವುದು ಸೌಭಾಗ್ಯ ಎಂದು ಹೇಳಿದರು.

ಘಟಕ ಉದ್ಘಾಟಿಸಿ ಮಾತನಾಡಿದ ಎಚ್.ಕೆ.ಪಾಟೀಲ, ಈ ಯೋಜನೆಯ ಮಹತ್ವದ ಬಗ್ಗೆ ಪ್ರತಿಯೊಬ್ಬರು ಅರಿತುಕೊಂಡು, ಪಕ್ಕದ ಗ್ರಾಮದವರಿಗೂ ತಿಳುವಳಿಕೆ ನೀಡಿ ರೈತರ ಆರೋಗ್ಯದ ಬಗ್ಗೆ ನಿಗಾವಹಿಸಬೇಕು ಎಂದು ಹೇಳಿದರು.  ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ವಿ.ಮಾಡಳ್ಳಿ,  ಡಿ.ವಿ.ಕುರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದಮಠದ ದಯಾನಂದ ಸ್ವಾಮೀಜಿ, ಸತ್ತಿಗೇರಿಯ ರೇವಣಸಿದ್ದ ಶರಣರು, ಶಿವಳ್ಳಿ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

 ಮಾಜಿ ಜಿ.ಪಂ.ಅಧ್ಯಕ್ಷರಾದ ಬಿ.ಬಿ.ಗಂಗಾಧರಮಠ, ಸುಧಾ ಲಿಂಗರಡ್ಡಿ, ತಾಲ್ಲೂಕು  ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಎಚ್.ಕೋನರಡ್ಡಿ, ಧುರೀಣರಾದ ವಿ.ಡಿ. ಅಂದಾನಿಗೌಡರ, ಸಿದ್ದನಗೌಡ ಪಾಟೀಲ, ಶಾಂತವ್ವ ಮುಂದಿನಮನಿ, ಸುನೀಲ ಗೌಡರ, ಕೆ.ಡಿ.ಕೊಂಡಿಕೊಪ್ಪ, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು. ಗ್ರಾ.ಪಂ.ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ ಸ್ವಾಗತಿಸಿದರು. ಎಂ.ಬಿ.ಪವಾಡಶೆಟ್ಟರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.