ADVERTISEMENT

ಶುರುವಾಗದ ಕಾಲುವೆ ರಿಪೇರಿ: ನಾಳೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 6:23 IST
Last Updated 21 ಡಿಸೆಂಬರ್ 2012, 6:23 IST
ಧಾರವಾಡ: ನೂರಾರು ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಮಲಪ್ರಭಾ ಬಲದಂಡೆ ಕಾಲುವೆಯು ಜಿಲ್ಲೆಯ ಆಯಟ್ಟಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಒಡೆದಿದ್ದರೂ ಗುರುವಾರ ರಾತ್ರಿಯವರೆಗೂ ರಿಪೇರಿ ಕಾರ್ಯ ಆರಂಭವಾಗಿರಲಿಲ್ಲ. 
 
ಬೆಂಗಳೂರು ಮೂಲದ `ಸಿವಿಲ್ ಏಡ್ ಟೆಕ್ನೊ ಕ್ಲಿನಿಕ್' ಸಂಸ್ಥೆಯ ತಜ್ಞರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ನೀಡಿದರು. ಆದರೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ತಕ್ಷಣಕ್ಕೆ ಕಾಮಗಾರಿ ಕೈಗೊಳ್ಳಲಿಲ್ಲ. 
 
ಕರ್ನಾಟಕ ರಾಜ್ಯ ಗುಣಮಟ್ಟ ಪರಿಶೀಲನೆ ಕಾರ್ಯಪಡೆ ಅಧ್ಯಕ್ಷ ಸಿ.ಎಸ್.ವಿಶ್ವನಾಥ್ ಅವರು ಇದೇ 22ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಆ ಬಳಿಕವಷ್ಟೇ ರಿಪೇರಿ ಕಾರ್ಯ ಆರಂಭಿಸಲಾಗುವುದು ಎಂದು ಮಲಪ್ರಭಾ ಬಲದಂಡೆ ಕಾಲುವೆ ಯೋಜನೆ (ಎಂಆರ್‌ಬಿಸಿಎಲ್)ಯ ಬ್ಯಾಹಟ್ಟಿ ವಿಭಾಗದ ಕಾರ್ಯ ನಿರ್ವಾ ಹಕ ಎಂಜಿನಿ ಯರ್ ಇಸ್ಮಾಯಿಲ್ ಖಾನ್ `ಪ್ರಜಾವಾಣಿ'ಗೆ ತಿಳಿಸಿದರು.
 
ಗುರುವಾರ ಕುಸಿದುಬಿದ್ದ ಮಣ್ಣು ಹಾಗೂ ಸಿಮೆಂಟ್ ಅವಶೇಷಗಳನ್ನು ಸರಿಸುವ ಕಾರ್ಯ ನಿಧಾನಗತಿಯಲ್ಲಿ ನಡೆಯಿತು. ಏತನ್ಮಧ್ಯೆ ಕಾಲುವೆಗೆ ನೀರು ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಕಾಲುವೆ ಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಬೇಕೇ ಅಥವಾ ಶಾಶ್ವತವಾಗಿ ನಿರ್ಮಾಣ ಮಾಡಬೇಕೇ ಎಂಬ ಗೊಂದಲದಲ್ಲಿ ಅಧಿಕಾರಿಗಳಿದ್ದಾರೆ. ವಿಶ್ವನಾಥ್ ಅವರು ಬಂದ ಬಳಿಕವೇ ರಿಪೇರಿ ಕಾರ್ಯ ಆರಂಭಗೊಳ್ಳಲಿದೆ ಎಂದು ಖಾನ್ ತಿಳಿಸಿದರು. 
 
ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆಗೆ ನೀರು ಪೂರೈಕೆ ಸ್ಥಗಿತಗೊಳಿಸಿದ ಬಗ್ಗೆ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನಾ ವಲಯದ ಮುಖ್ಯ ಎಂಜಿನಿಯರ್ ಪ್ರಕಟಣೆ ನೀಡಿದ್ದಾರೆ. ಎರಡು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದ್ದು, ಒಂದು ವಾರದಲ್ಲಿ ಮತ್ತೆ ಕಾಲುವೆಗೆ ನೀರು ಹರಿಯ ಬಹುದು ಎಂದು ಎಂಜಿನಿ ಯರ್‌ಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.