ಹುಬ್ಬಳ್ಳಿ: `ಉತ್ತರ ಕರ್ನಾಟಕದ ಪ್ರಮುಖ ನಾಯಕರೂ ಆದ ಬಹುಕಾಲದ ಹಿರಿಯ ಸ್ನೇಹಿತ ಜಗದೀಶ ಶೆಟ್ಟರ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ~ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು.
ನಗರದಲ್ಲಿ ಸೋಮವಾರ ವರದಿಗಾರರ ಮಾತನಾಡಿದ ಅವರು, `ಶೆಟ್ಟರ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗಬೇಕು ಎನ್ನುವ ಅಪೇಕ್ಷೆ ಇಟ್ಟುಕೊಂಡೇ ಮುಖಂಡರ ಜೊತೆ ಮಾತನಾಡಲು ನಾನೂ ನವದೆಹಲಿಗೆ ಹೊರಟಿದ್ದೇನೆ. ಅವರು ಮುಖ್ಯಮಂತ್ರಿಯಾದರೆ ನಮಗೆಲ್ಲ ಅದೇ ಹರ್ಷ~ ಎಂದು ಹೇಳಿದರು.
`ಶೆಟ್ಟರ ಮುಖ್ಯಮಂತ್ರಿ ಆಗಬೇಕೆಂಬುದು ನಮ್ಮ ಬಹುದಿನದ ಆಕಾಂಕ್ಷೆಯಾದರೂ ಅದಕ್ಕೆ ಈವರೆಗೆ ಅವಕಾಶ ಸೃಷ್ಟಿಯಾಗಿರಲಿಲ್ಲ. ಈಗ ಅಂತಹ ಅವಕಾಶ ಗೋಚರಿಸಿದ್ದು, ಅವರನ್ನೇ ಸಿ.ಎಂ ಮಾಡಬೇಕು ಎನ್ನುವ ಒತ್ತಾಯವನ್ನು ನಾವೂ ಮಾಡುತ್ತೇವೆ~ ಎಂದು ಅವರು ತಿಳಿಸಿದರು.
`ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ವಿರೋಧ ಪಕ್ಷದ ನಾಯಕನ ಹುದ್ದೆ, ವಿಧಾನಸಭೆ ಅಧ್ಯಕ್ಷ ಪೀಠ ಹಾಗೂ ವಿವಿಧ ಇಲಾಖೆಗಳ ಸಚಿವರಾಗಿ ಅಪಾರ ಅನುಭವ ಹೊಂದಿರುವ ಶೆಟ್ಟರ, ಮುಖ್ಯಮಂತ್ರಿ ಹುದ್ದೆಗೆ ಅರ್ಹವಾದ ವ್ಯಕ್ತಿ ಯಾಗಿದ್ದಾರೆ~ ಎಂದು ಅಭಿಪ್ರಾಯ ಪಟ್ಟರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, `ಡಿ.ವಿ. ಸದಾನಂದಗೌಡರು ಕೂಡ ನಮ್ಮ ನಾಯಕರು. ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ~ ಎಂದು ಹೇಳಿದರು.
ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, `3-4 ದಿನಗಳಲ್ಲಿ ಎಲ್ಲ ಗೊಂದಲವೂ ತಿಳಿಯಾಗಲಿದೆ~ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.