ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇ 6ರ ಸಮಾವೇಶಕ್ಕಾಗಿ ರೈಲ್ವೆ ಮೈದಾನದ ಕಾಂಪೌಂಡ್ ಗೋಡೆಯನ್ನು ಮೂರು ಕಡೆ ಕೆಡವಿ, ರಸ್ತೆ ನಿರ್ಮಿಸಲಾಗುತ್ತಿದೆ.
ಮೈದಾನದ ಎಡಭಾಗದಲ್ಲಿ ರೈಲ್ವೆ ಸಿಬ್ಬಂದಿ ಕೊಠಡಿಗಳಿದ್ದು, ಅದೇ ಮಾರ್ಗದಲ್ಲಿ ವಿಶೇಷ ಭದ್ರತಾ ಪಡೆ (ಎಸ್ಪಿಜಿ)ಯ ರಕ್ಷಣೆ ಹೊಂದಿರುವ ಪ್ರಧಾನಿ ಅವರನ್ನು ಕರೆದುಕೊಂಡು ಬರಲಾಗುತ್ತದೆ. ಹೀಗಾಗಿ, ಮೂರು ಕಡೆಗಳಲ್ಲಿ ವಾಹನ ಹೋಗುವಷ್ಟು ಕಾಂಪೌಂಡ್ ಅನ್ನು ಶುಕ್ರವಾರ ನೆಲಸಮಗೊಳಿಸಲಾಗಿದೆ. ಅಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ವೇದಿಕೆ ನಿರ್ಮಾಣದಲ್ಲಿ ತೊಡಗಿದ್ದ ಗುತ್ತಿಗೆದಾರರೊಬ್ಬರು ತಿಳಿಸಿದರು.
‘ಭದ್ರತಾ ಕಾರಣಗಳಿಗಾಗಿ ಪ್ರಧಾನಿ ಮೋದಿ ಅವರಿಗೆ ಪ್ರತ್ಯೇಕ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ವೇದಿಕೆಗೆ ಸಮೀಪದಲ್ಲೇ ಮೋದಿ ಅವರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡುವಂತೆ ಸಂಘಟಕರು ಹಾಗೂ ಶಾಮಿಯಾನ ನಿರ್ಮಾಣದ ಹೊಣೆಹೊತ್ತವರಿಗೆ ಎಸ್ಪಿಜಿ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸೂಚನೆಯಂತೆಯೇ ಕಾಂಪೌಂಡ್ ಕೆಡವಿ ಮಾರ್ಗ ನಿರ್ಮಿಸಲಾಗಿದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ, ‘ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿಯವರು ಮೈದಾನವನ್ನು ಒಂದು ದಿನದ ಮಟ್ಟಿಗೆ ಬಾಡಿಗೆಗೆ ಪಡೆದಿದ್ದಾರೆ. ಇದಕ್ಕಾಗಿ ₹ 4.70 ಲಕ್ಷ ಪಾವತಿ ಮಾಡಲಿದ್ದಾರೆ. ಕಾಂಪೌಂಡ್ ಒಡೆದ ಬಗ್ಗೆ ಮಾಹಿತಿ ಇಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.