ADVERTISEMENT

ಸರ್ಕಾರಿ ನೌಕರರ ವೇತನ ಸಮಿತಿ ರಚನೆ: ಸ್ವಾಗತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 10:10 IST
Last Updated 9 ಜೂನ್ 2011, 10:10 IST

ಧಾರವಾಡ: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್ ಅಧ್ಯಕ್ಷತೆಯಲ್ಲಿ ವೇತನ ಸಮಿತಿ ರಚಿಸಿರುವುದನ್ನು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ (ಎಕೆಎಸ್‌ಜಿಇಎಫ್) ಸ್ವಾಗತಿಸಿದೆ.

ಶೇಕಡಾ 50ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸುವುದೂ ಸೇರಿದಂತೆ ರಾಜ್ಯದಲ್ಲಿ 6ನೇ ವೇತನ ಆಯೋಗ ರಚನೆ ಮಾಡಿ ಶೀಘ್ರವೇ ಹೊಸ ವೇತನ ನೀಡಬೇಕೆಂದು ಆಗ್ರಹಿಸಿ ಜನವರಿ 17ರಿಂದ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ ರಾಜ್ಯವ್ಯಾಪಿ ನಡೆಸಿದ ಪತ್ರ ಚಳವಳಿ ಫಲವಾಗಿ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದಂತೆ ವೇತನ ಸಮಿತಿ ರಚಿಸಿದೆ ಎಂದು ತಿಳಿಸಿದೆ.

ವೇತನ ಸಮಿತಿಯಲ್ಲಿ  ಆರ್ಥಿಕ ಇಲಾಖೆ ಕಾರ್ಯ ದರ್ಶಿ ಎಲ್.ವಿ.ನಾಗರಾಜನ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ  ಸುಭಾಷ್ ಕುಂಟಿಯಾ ಸದಸ್ಯರಾಗಿ ಹಾಗೂ ಐಎಎಸ್ ಅಧಿಕಾರಿ ಎಚ್.ಶಶಿಧರ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ರಾಷ್ಟ್ರೀಯ ಬೆಲೆ ಸೂಚ್ಯಂಕದ ಆಧಾರದ ಮೇಲೆ ವಿವಿಧ ರಾಜ್ಯಗಳು ಈಗಾಗಲೇ ಜಾರಿಗೊಳಿಸಿದಂಥ ಹೊಸ  ವೇತನವನ್ನು ಪರಿಗಣಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಮೂಲವೇತನ ಹಾಗೂ ಇತರೇ ವೇತನ  ಸೌಲಭ್ಯಗಳ ನೀಡಿಕೆಯಲ್ಲಿ ಅನ್ಯಾಯ ವಾಗದಂತೆ ಸೂಕ್ತ ಶಿಫಾರಸುಗಳೊಂದಿಗೆ ಪರಿಪೂರ್ಣ ವರದಿಯನ್ನು ವಿಳಂಬವಿಲ್ಲದೆ ನೀಡಬೇಕು ಎಂದು  ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಮುದಗಣ್ಣವರ, ರಾಜ್ಯ ಪರಿಷತ್ ಸದಸ್ಯ ವಿ.ಆರ್.ನರಗುಂದ, ಉಪಾಧ್ಯಕ್ಷ ಗುರುಮೂರ್ತಿ ಯರಗಂಬಳಿ ಮಠ, ಅ.ರಾ.ಮಲ್ಲಾಪೂರ, ಶಿವಣ್ಣ ಕಂಬಿ, ಮಂಜುನಾಥ ಹೆಗಡೆ, ಎ.ಎಸ್.ಪಟಗುಂದಿ, ಸಹದೇವ ಬ್ಯಾಟಿಗೇರ, ಸುರೇಶ ಕಳ್ಳಿಗುದ್ದಿ, ಎಚ್.ಬಿ.ವಾದಿರಾಜ, ಶಂಕರ ಘಟ್ಟಿ, ಶಿವಕ್ಕ ನವಲೂರ, ಎಂ.ಜಿ.ಮರಚರಡ್ಡಿ, ಸಿ.ಎಂ.ಕಿತ್ತೂರ, ಬಿ.ಎಚ್. ವಾದಿರಾಜ ಮತ್ತಿತರರು  ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.