ಹುಬ್ಬಳ್ಳಿ: ಸುಪ್ರೀಂಕೋರ್ಟ್ನ ಅರಣ್ಯ ಪೀಠವು ರಾಜ್ಯದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿ ಪ್ರದೇಶಗಳಲ್ಲಿ ಅರಣ್ಯ ಪುನರುಜ್ಜೀವನ ಮಾಡುವಂತೆ ಇದೇ 13ರಂದು ನೀಡಿದ `~ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ~ (ಎನ್ಸಿಪಿಎನ್ಆರ್) ಸ್ವಾಗತಿಸಿದ್ದು, ಅರಣ್ಯ ಪುನರುಜ್ಜೀವನ ಕಾರ್ಯ ಆಗುವವರೆಗೂ ಮತ್ತೆ ಗಣಿಗಾರಿಕೆಗೆ ಒಪ್ಪಿಗೆ ನೀಡಬಾರದು ಎಂದು ಅಭಿಪ್ರಾಯಪಟ್ಟಿದೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್ಸಿಪಿಎನ್ಆರ್ನ ಮುಖಂಡ ಹಾಗೂ ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಆರ್.ಹಿರೇಮಠ, ಸುಪ್ರೀಂಕೋರ್ಟ್ನ ಈ ಆದೇಶ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಹಾಗೂ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆ ತರುವಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯ 126, ತುಮಕೂರಿನ 25 ಹಾಗೂ ಚಿತ್ರದುರ್ಗದ 26 ಗಣಿಗಳಲ್ಲಿ ಅರಣ್ಯ ಪುನರುಜ್ಜೀವನ ಮಾಡುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ, ಸ್ವತಂತ್ರಕುಮಾರ್ ಅವರನ್ನು ಒಳಗೊಂಡ ಅರಣ್ಯ ಪೀಠವು ಈ ಆದೇಶವನ್ನು ನೀಡಿದೆ. ವಿಚಾರಣೆ ಸಮಯದಲ್ಲಿ ಗಣಿ ಧಣಿಗಳ ಪರ ವಕೀಲರು ಗಣಿಗಾರಿಕೆ ಆರಂಭಿಸುವಂತೆ ಮಾಡಿದ ಮನವಿಯನ್ನು ಪೀಠವು ತಳ್ಳಿಹಾಕಿತು ಎಂದು ಹಿರೇಮಠ ತಿಳಿಸಿದರು.
ವಿಚಾರಣೆಯ ಕೊನೆಯಲ್ಲಿ ಬಿ.ಎಸ್. ಯಡಿಯೂರಪ್ಪ ಪರ ವಕೀಲ ಸೋಲಿ ಸೊರಾಬ್ಜಿ ಅವರು, ಯಡಿಯೂರಪ್ಪ ಮೇಲಿರುವ ಮೊಕದ್ದಮೆಯೊಂದನ್ನು ಹೈಕೋರ್ಟ್ ವಜಾಗೊಳಿಸಿರುವುದನ್ನು ಕೋರ್ಟ್ ಗಮನಕ್ಕೆ ತಂದು, ಗಣಿ ಕಂಪೆನಿಗಳಿಂದ ಯಡಿಯೂರಪ್ಪ ಅವರು ಕಪ್ಪ ಪಡೆದಿಲ್ಲ ಎಂದು ವಾದಿಸಿದರು. ಆದರೆ ಸುಪ್ರೀಂಕೋರ್ಟ್ ಆ ವಿಚಾರಣೆಯನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸಲಾಗಿದ್ದು, ವಿಚಾರಣೆ ಮುಂದುವರಿಯಲಿದೆ ಎನ್ನುವ ಮೂಲಕ ವಕೀಲರ ವಾದ ವಿಫಲವಾಯಿತು ಎಂದು ಅವರು ಹೇಳಿದರು.
ರಮೇಶ್ಕುಮಾರ್ ಜಮೀನು ನೀಡಲಿ: ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ಕುಮಾರ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಕ್ರಮವಾಗಿ 60 ಎಕರೆ ಅರಣ್ಯ ಜಮೀನನ್ನು ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ನಡೆಸಿದ ಸರ್ವೆಯಲ್ಲಿ ತಿಳಿದು ಬಂದಿದ್ದು, ಸ್ವಯಂ ಪ್ರೇರಣೆಯಿಂದ ಅವರು ಜಮೀನನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧವು ಎನ್ಸಿಪಿಎನ್ಆರ್ ರಿಟ್ ಅರ್ಜಿ ಸಲ್ಲಿಸಲಿದೆ ಎಂದರು.
`ಕೊಪರ್ನಿಕಸ್ ಹೇಳಿದ್ದೂ ಹಳೆಯದೇ~
`ಹಿರೇಮಠರು ಸಿಇಸಿಗೆ ತಮ್ಮ ವಿರುದ್ಧ ಹಳೆಯ ದಾಖಲೆಗಳನ್ನೇ ಸಲ್ಲಿಸಿದ್ದಾರೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರಲ್ಲ~ ಎಂಬ ಪ್ರಶ್ನೆಯೊಂದಕ್ಕೆ ಸ್ವಾರಸ್ಯಕರವಾಗಿ ಪ್ರತಿಕ್ರಿಯೆ ನೀಡಿದ ಎಸ್.ಆರ್.ಹಿರೇಮಠರು, `ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂಬುದು ಹಳೆಯ ಸತ್ಯವಾದರೂ, ಕೊಪರ್ನಿಕಸ್ ಅದನ್ನು ಸಿದ್ಧ ಮಾಡಿ ತೋರಿಸಿದರು. ನಾವು ಸಿಇಸಿಗೆ ಸಲ್ಲಿಸಿದ ದಾಖಲೆಗಳು ಹಳೆಯದೇ ಇರಬಹುದು. ಅವು ಸತ್ಯ ಸಂಗತಿಗಳೇ ಅಲ್ಲವೇ?~ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.