ಧಾರವಾಡ: ಕಲಬುರ್ಗಿಯ ಅಂದೋಲಾ ಗ್ರಾಮದ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಕುರಿತು ಐಐಎಂ ಹಾಗೂ ಕೆಲ ಮುಸ್ಲೀಂ ಸಂಘಟನೆಗಳು ನೀಡುತ್ತಿರುವ ಹೇಳಿಕೆಯನ್ನು ಖಂಡಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸೇನೆಯ ಜಿಲ್ಲಾ ಸಂಚಾಲಕ ಮಂಜುನಾಥ ಕವಳಿ, ‘ಗ್ರಾಮದ ರಸ್ತೆಯಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸುವ ವೇಳೆ ಮುಸ್ಲಿಮರಿಗೆ ಸೇರಿದ ಅಂಗಡಿಗಳನ್ನು ಹಾಗೇ ಬಿಟ್ಟು, ಇತರರ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಳಿದ ಅಂಗಡಿಗಳನ್ನೂ ತೆರವುಗೊಳಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿ ಅದು ಕಾರ್ಯರೂಪಕ್ಕೆ ಬರುವಂತೆ ಮಾಡಿದರು. ಇದರಿಂದ ಹಿಂದೂಗಳ ಮೇಲೆ ಹಲ್ಲೆ ನಡೆದರೂ, ಆರೋಪಿಗಳನ್ನು ಬಂದಿಸಿಲ್ಲ. ಹಲ್ಲೆಗೆ ಸ್ವಾಮೀಜಿ ಅವರೇ ಕಾರಣ ಎಂದು ಆರೋಪ ಮಾಡಿರುವುದು ಸರಿಯಲ್ಲ’ ಎಂದರು.
‘ಹಲ್ಲೆಯನ್ನು ಮುಚ್ಚಿಹಾಕಲು ಹಾಗೂ ಗ್ರಾಮಸ್ಥರಲ್ಲಿ ಪರಸ್ಪರ ಕಿಚ್ಚು ಹಚ್ಚಲು ಕೆಲ ಸಂಘಟನೆಗಳು ಮುಂದಾಗಿವೆ. ಜತೆಗೆ ಇಂಥ ಶಕ್ತಿಗಳು ದಲಿತರನ್ನು ಎತ್ತಿಕಟ್ಟಿ, ಸ್ವಾಮೀಜಿ ವಿರುದ್ಧ ಜಾತಿನಿಂದನಾ ಪ್ರಕರಣ ದಾಖಲಿಸುವಂತೆಯೂ ಪ್ರಚೋದಿಸುತ್ತಿದ್ದಾರೆ’ ಎಂದು ಆರೋಪ ಮಾಡಿದರು.
ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಣೇಶ ಕದಂ, ನಿತ್ಯಾನಂದ ಹಿರೇಮಠ, ಪ್ರವೀಣ ಹೂಗಾರ, ವಿಕಾಸ ದೊಡವಾಡ, ಸಿದ್ದು ಸಾಲಿಮಠ, ಕುಮಾರ ಚಲವಾದಿ, ಚೇತನ ಪೂಜಾರ, ನಾಗೇಶ ಮಾದರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.