ADVERTISEMENT

ಹೆಬ್ಬಳ್ಳಿ: ಚುನಾವಣಾಧಿಕಾರಿ ಕಾರಿಗೆ ಕಲ್ಲು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:10 IST
Last Updated 19 ಡಿಸೆಂಬರ್ 2012, 8:10 IST

ಹೆಬ್ಬಳ್ಳಿ (ಧಾರವಾಡ): ಇಲ್ಲಿಯ ಗ್ರಾಮ ಪಂಚಾಯಿ ತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಗಾಗಿ ಮಂಗಳವಾರ ನಡೆದ ಚುನಾವಣೆ ವೇಳೆ, ಗ್ರಾ.ಪಂ. ಸದಸ್ಯರ ಒಂದು ಬಣ ಚುನಾವಣಾ ಪ್ರಕ್ರಿಯೆ ಯನ್ನು ಮುಂದಕ್ಕೆ ಹಾಕಬೇಕು ಎಂದು ಒತ್ತಾಯಿಸಿದ ಸಂದ ರ್ಭದಲ್ಲಿ ನಡೆದ ಘರ್ಷಣೆ ಯಲ್ಲಿ ಚುನಾವಣಾಧಿಕಾರಿಯ ಕಾರಿಗೆ ಕಲ್ಲು ಬಿದ್ದು ಗಾಜು ಗಳು ಪುಡಿಪುಡಿಯಾದವು.

ಕೆಲ ಹೊತ್ತು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಘಟನೆ ವಿವರ: ಕಡಿಮೆ ಸದಸ್ಯ ಬಲ ಹೊಂದಿದ್ದ ಬಸವರಾಜ ತಂಬಾಕದ, ರವಿ ಸಾದರ, ನಿರ್ಮಲಾ ಅವರನ್ನು ಒಳಗೊಂಡ ಬಣ ತಮಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವ ಬಗ್ಗೆ ನೋಟಿಸ್ ನೀಡಿಲ್ಲ ಎಂದು ಚುನಾವಣಾಧಿಕಾರಿ ಆಗಿ ಕಾರ್ಯನಿರ್ವಹಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಐ.ಎಸ್.ಸಾಣಿಕೊಪ್ಪ ಅವರಿಗೆ ತಕರಾರು ತೆಗೆದರು.

ಅವರ ಮಾತಿನಂತೆ ಚುನಾವಣೆಯ ದಿನಾಂಕವನ್ನು ಮುಂದಕ್ಕೆ ಹಾಕುವುದಾಗಿ ಅಧಿಕಾರಿ ತಿಳಿಸಿದರು ಎನ್ನಲಾಗಿದೆ.ಬಳಿಕ ಅವರನ್ನು ಭೇಟಿಯಾದ ಮಹೇಶ ಜೋಶಿ, ಪ್ರೇಮಾ ಕಾಲಾಳರ ಅವರ ಬಣ ಚುನಾವಣೆ ನಡೆಸಬೇಕು ಎಂದು ಆಗ್ರಹ ಪಡಿಸಿತು. ಇದಕ್ಕೆ ಸಮ್ಮತಿ ನೀಡಿದ ಸಾಣಿಕೊಪ್ಪ ಮಧ್ಯಾಹ್ನ 1 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಿದರು.

ಇದು ಇನ್ನೊಂದು ಗುಂಪಿಗೆ ಗೊತ್ತಿರಲಿಲ್ಲ ಎನ್ನಲಾಗಿದ್ದು, ತಂಬಾಕದ ನೇತೃತ್ವದ ಬಣದವರು ಸಮಯ ಮೀರಿದ ಬಳಿಕ ನಾಮಪತ್ರ ಸಲ್ಲಿಕೆಗೆ ಮುಂದಾದಾಗ ಚುನಾವಣಾಧಿಕಾರಿಗಳು ಅವಕಾಶ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಕೆಲವರು ಸಾಣಿಕೊಪ್ಪ ಅವರ ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೇ, ಮಾತಿನ ಚಕಮಕಿ ನಡೆಸಿದರು.

ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶಿವಾನಂದ ಭಜಂತ್ರಿ ಹಾಗೂ ಧಾರವಾಡ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಬಂಡಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಚುನಾವಣೆ ನಡೆಸಿದರು.
15 ಮತಗಳನ್ನು ಪಡೆಯುವ ಮೂಲಕ ಮಹೇಶ ಜೋಶಿ ಅಧ್ಯಕ್ಷರಾಗಿ ಹಾಗೂ ಪ್ರೇಮಾ ಕಾಲಾಳರ ಉಪಾಧ್ಯಕ್ಷೆಯಾಗಿ ಚುನಾಯಿತರಾದರು.

ಒಟ್ಟು 29 ಸದಸ್ಯ ಬಲದ ಹೆಬ್ಬಳ್ಳಿ ಗ್ರಾ.ಪಂ.ನಲ್ಲಿ ಒಬ್ಬ ಸದಸ್ಯೆ ಜೈಲಿನಲ್ಲಿದ್ದುದರಿಂದ ಮತದಾನ ಮಾಡಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.