ಹುಬ್ಬಳ್ಳಿ: ಅಶೋಕ ಲೇಲ್ಯಾಂಡ್ನ ಲಘು ವಾಣಿಜ್ಯ ವಾಹನಗಳ ಅಧಿಕೃತ ಮಾರಾಟದ ಕುಮಾರ ಎಂಜಿನಿಯರಿಂಗ್ ಕಂಪೆನಿ ಉದ್ಘಾಟನೆ ಹಾಗೂ ದೋಸ್ತ್ ಎಂಬ ಲಘು ವಾಹನ ಬಿಡುಗಡೆ ಸಮಾರಂಭ ಗುರುವಾರ ರಾಯಾಪುರದಲ್ಲಿ ನಡೆಯಿತು.
ಅಶೋಕ ಲೇಲ್ಯಾಂಡ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ನಿತಿನ್ ಸೇಠ್, ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಶಿರಹಟ್ಟಿ ಫಕೀರೇಶ್ವರ ಸ್ವಾಮೀಜಿ ಮಳಿಗೆ ಹಾಗೂ ವಾಹನವನ್ನು ಉದ್ಘಾಟಿಸಿದರು.
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶೋಕ ಲೇಲ್ಯಾಂಡ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ನಿತಿನ್ ಸೇಠ್, `ಕುಮಾರ ಎಂಜಿನಿಯರಿಂಗ್ ಕಂಪೆನಿಯು ಉತ್ತರ ಕರ್ನಾಟಕದ ಮೊದಲ ಅಧಿಕೃತ ಮಾರಾಟ ಮಳಿಗೆ. ಈಗಾಗಲೇ ಬೆಂಗಳೂರಿನಲ್ಲಿ ಮಳಿಗೆ ಆರಂಭಗೊಂಡಿದೆ.
ಶೀಘ್ರದಲ್ಲೇ ಮಂಗಳೂರಲ್ಲಿ ಮಾರಾಟ ಮಳಿಗೆ ಉದ್ಘಾಟನೆಗೊಳ್ಳಲಿದೆ. ಉತ್ತರ ಕರ್ನಾಟಕದಾದ್ಯಂತ ದೋಸ್ತ್ ವಾಹನಗಳ ಬೇಡಿಕೆ ಹೆಚ್ಚಿದೆ. ದೀಪಾವಳಿ ಹೊತ್ತಿಗೆ ವಾಹನಗಳ ಮಾರಾಟ ಸಂಖ್ಯೆ ನೂರು ದಾಟಲಿದೆ~ ಎಂದು ಅವರು ಹೆಮ್ಮೆಯಿಂದ ಹೇಳಿದರು.
`ದೋಸ್ತ್ ವಾಹನದ ಬೆಲೆ ರೂ. 3.80 ಲಕ್ಷದಿಂದ ರೂ. 4.41 ಲಕ್ಷವರೆಗೆ ದರವಿದೆ. ಇದರಲ್ಲಿ ಹವಾನಿಯಂತ್ರಣ, ಪವರ್ ಸ್ಟೇರಿಂಗ್ ಮೊದಲಾದ ಸೌಲಭ್ಯಗಳಿವೆ. ಇದರೊಂದಿಗೆ ಹೆಚ್ಚುವರಿ ಸೌಲಭ್ಯಗಳಿರುವ ದೋಸ್ತ್ ವಾಹನಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ.
ಈಗಾಗಲೇ ಬೆಂಗಳೂರು ಹತ್ತಿರದ ಹೊಸೂರಿನಲ್ಲಿ ದೋಸ್ತ್ ವಾಹನದ ಘಟಕ ಸ್ಥಾಪನೆಯಾಗಿದೆ. ಈ ಘಟಕದಲ್ಲಿ ವಾಹನಗಳ ಉತ್ಪಾದನಾ ಸಾಮರ್ಥ್ಯ ಬರುವ ಆರ್ಥಿಕ ವರ್ಷದಲ್ಲಿ 55 ಸಾವಿರ ವಾಹನಗಳಿಗೆ ಹೆಚ್ಚಲಿದೆ~ ಎಂದು ಹೇಳಿದರು.
`ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ದೋಸ್ತ್ ವಾಹನಗಳ ಮಾರಾಟ ಮಳಿಗೆ ಆರಂಭಗೊಂಡಿವೆ. ಈಗಾಗಲೇ ಒಟ್ಟು 12,500 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ~ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ ಲೇಲ್ಯಾಂಡ್ ಕಾರ್ಯನಿರ್ವಾಹಕ ನಿರ್ದೇಶಕ ಶಶಿಕುಮಾರ ದೇಸಾಯಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.