ADVERTISEMENT

‘ಗಡಿನಾಡ ನಡಿಗೆ ಬೆಂಗಳೂರು ಕಡೆಗೆ’ ಸೈಕಲ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:29 IST
Last Updated 24 ಸೆಪ್ಟೆಂಬರ್ 2013, 5:29 IST

ಹುಬ್ಬಳ್ಳಿ: ಗಡಿನಾಡ ಅಭಿವೃದ್ಧಿಗೆ ಆಗ್ರಹಿಸಿ ಮಹಾರಾಷ್ಟ್ರದ ಜತ್ತದಿಂದ ಬೆಂಗಳೂರಿನವರೆಗೆ ಸೈಕಲ್‌ ಜಾಥಾ ಹೊರಟಿರುವ ಸುಭಾಷ್‌ ಬೆಳ್ಳುಬ್ಬಿ ಹಾಗೂ ಗಿರಿಮಲ್ಲ ಮೂಡಳಿ ಸೋಮ­ವಾರ ಹುಬ್ಬಳ್ಳಿಗೆ ಬಂದಿದ್ದರು.

ಈ ಸಂದರ್ಭದಲ್ಲಿ ‘ಪ್ರಜಾವಾಣಿ’­ಯೊಂದಿಗೆ ಮಾತನಾಡಿದ ಸುಭಾಷ್‌ ಬೆಳ್ಳುಬ್ಬಿ, ’ಗಡಿನಾಡು ಹಾಗೂ ಗಡಿ­ನಾಡ ಕನ್ನಡಿಗರತ್ತ ಸರ್ಕಾರ ಗಮನ­ಕೊಡಬೇಕು ಎಂದು ಆಗ್ರಹಿಸಲು ನಾವು ಸೈಕಲ್‌ ಜಾಥಾ ಹೊರಟಿದ್ದೇವೆ. ಕಳೆದ ವರ್ಷವೂ ನಾವು ಇದೇ ರೀತಿ ಜತ್ತದಿಂದ ಬೆಂಗಳೂರಿನವರೆಗೆ ಸೈಕಲ್‌ ಜಾಥಾ ನಡೆಸಿದ್ದೆವು. ಈ ಬಾರಿ 19ನೇ ತಾರೀಖಿ­ನಿಂದ ಜಾಥಾ ಹೊರಟಿದ್ದು, ಇದೇ 25ಕ್ಕೆ ಬೆಂಗಳೂರು ತಲುಪಿ, ಮುಖ್ಯಮಂತ್ರಿ­­ಯವರಿಗೆ ಗಡಿನಾಡ ಅಭಿವೃದ್ಧಿ ಕುರಿತಂತೆ ಮನವಿ ಸಲ್ಲಿಸು­ತ್ತೇವೆ’ ಎಂದರು.

ಸಿಂಧೂರ, ಜಮಖಂಡಿ, ರಾಮ­ದುರ್ಗ, ಹುಬ್ಬಳ್ಳಿ ಮಾರ್ಗದ ಮೂಲಕ ಸೈಕಲ್‌ ಜಾಥಾ ಹೊರಟಿರುವ ಇವರು, ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಬೆಂಗಳೂರು ತಲುಪಲಿದ್ದಾರೆ. ‘ಜತ್ತದ ಅಸಂಘಟಿತ ಕನ್ನಡಿಗರಾದ ನಾವು, ಮಾಧ್ಯಮಗಳ ಮೂಲಕ, ಜನಪ್ರತಿನಿಧಿಗಳ ಮೂಲಕ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ, ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಈ ಮೂಲಕವಾದರೂ ಸರ್ಕಾರದ ನಮ್ಮತ್ತ ಗಮನ ಕೊಡಲಿ ಎಂಬ ಉದ್ದೇಶದಿಂದ ಜಾಥಾ ಹೊರಟಿದ್ದೇವೆ’ ಎಂದು ಅವರು ಹೇಳಿದರು.   

‘ಶಿಕ್ಷಣ ಹಾಗೂ ನೌಕರಿಯಲ್ಲಿ ಗಡಿನಾಡ ಕನ್ನಡಿಗರಿಗಾಗಿ ಶೇ 5ರಷ್ಟು ಮೀಸಲಾತಿ ಶೀಘ್ರ ಜಾರಿಯಾಗಬೇಕು, ಮುಖ್ಯಮಂತ್ರಿಗಳು ಗಡಿನಾಡ ಪ್ರದೇಶಗಳಿಗೆ ಭೇಟಿ ಕೊಡಬೇಕು, ಪ್ರಾಧಿಕಾರ, ಅಕಾಡೆಮಿಗಳಿಗೆ ಗಡಿನಾಡ ಕನ್ನಡಿಗರನ್ನು ಸದಸ್ಯರನ್ನಾಗಿ ನೇಮಿಸಬೇಕು, ಗಡಿನಾಡಿನ ಕನ್ನಡ ಶಿಕ್ಷಕರಿಗೆ ತರಬೇತಿ ಹಾಗೂ ಕೈಪಿಡಿಗಳು ಕನ್ನಡ ಭಾಷೆಯಲ್ಲಿಯೇ ದೊರಕು­ವಂತಾಗಬೇಕು, ಕರ್ನಾಟಕ­ದಲ್ಲಿ ಆಯೋಜಿತ ಎಲ್ಲ ಉಚಿತ ತರಬೇತಿಗಳಿಗೆ ಗಡಿನಾಡ ಕನ್ನಡಿಗರಿಗೂ ಪ್ರವೇಶ ಸಿಗುವಂತಾಗಬೇಕು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಾಥಾ ಹೊರಟಿದ್ದೇವೆ’ ಎಂದು ಸುಭಾಷ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.