ಹುಬ್ಬಳ್ಳಿ/ಬೆಳಗಾವಿ: ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಸಾಗಣೆ ಮಾಡುತ್ತಿದ್ದ ಅಕ್ಕಿಯ 1,200 ಚೀಲಗಳು ಹಾಗೂ ಎರಡು ಲಾರಿಗಳನ್ನು ಖಾನಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ–ತಾಳಗುಪ್ಪ ಹೆದ್ದಾರಿಯ ಮಾರ್ಗಮಧ್ಯೆ ಬರುವ ಗೋಲಿಹಳ್ಳಿ ಗ್ರಾಮದ ಬಳಿ ಖಾನಾಪುರದ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ, ಇಬ್ಬರು ಲಾರಿ ಚಾಲಕರನ್ನು ಬಂಧಿಸಿದ್ದಾರೆ. ಬಂಧಿತರು ನೀಡಿದ ಹೇಳಿಕೆ ಆಧರಿಸಿ, ಹುಬ್ಬಳ್ಳಿಯ ಬಂಕಾಪುರ ಚೌಕದಲ್ಲಿರುವ ಬಾಲಾಜಿ ಟ್ರೇಡರ್ಸ್ ಮೇಲೆ ಖಾನಾಪುರ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಖಾನಾಪುರ ಆಹಾರ ನಿರೀಕ್ಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಖಾನಾಪುರ ಸಿಪಿಐ ಸುರೇಶ್ ಸಿಂಘಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬಾಲಾಜಿ ಟ್ರೇಡರ್ಸ್ ಮೇಲೆ ನಡೆದ ದಾಳಿ ಕುರಿತು ಮಾಲೀಕ ಮಂಜುನಾಥ ಹರ್ಲಾಪುರ ಖಚಿತಪಡಿಸಿದ್ದು, ‘ಇಲ್ಲಿ ಯಾವುದೇ ಅಕ್ಕಿ ವಶಪಡಿಸಿಕೊಂಡಿಲ್ಲ. ದಾಖಲೆ ಪತ್ರ ಪರಿಶೀಲಿಸಿ ತೆರಳಿದರು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.