ADVERTISEMENT

137 ಮಕ್ಕಳ ಬದುಕು ಅತಂತ್ರ

ಕೋವಿಡ್‌: ಮೂವರು ಅನಾಥ; 134 ಮಂದಿ ಮಕ್ಕಳಿಗೆ ಏಕಪೋಷಕರ ಆಸರೆ

ಬಸವರಾಜ ಹವಾಲ್ದಾರ
Published 25 ಜೂನ್ 2021, 4:12 IST
Last Updated 25 ಜೂನ್ 2021, 4:12 IST
.
.   

ಹುಬ್ಬಳ್ಳಿ: ಕೋವಿಡ್‌–19 ಬಹಳಷ್ಟು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ. ಇದಕ್ಕೆ ಜಿಲ್ಲೆಯೂ ಹೊರತಾಗಿಲ್ಲ. ಕೋವಿಡ್‌ನಿಂದಾಗಿ ಜಿಲ್ಲೆಯ ಮೂವರು ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದರೆ, 134 ಮಕ್ಕಳಿಗೆ ಏಕ ಪೋಷಕರೇ ಆಸರೆ.

ಪೋಷಕರೊಬ್ಬರನ್ನು ಕಳೆದುಕೊಂಡು ಮಕ್ಕಳು ಬಾಲ್ಯದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವರು ತಂದೆ ಅಥವಾ ತಾಯಿಯೊಂದಿಗೆ ವಾಸಿಸುತ್ತಿದ್ದರೆ, ಇನ್ನು ಕೆಲವರು ಏಕ ಪೋಷಕರೊಂದಿಗೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಹಾಗೂ ನವಲಗುಂದ ತಾಲ್ಲೂಕಿನಲ್ಲಿ ತಂದೆ–ತಾಯಿ ಕಳೆದುಕೊಂಡಿರುವ ಮೂವರು ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ.

ADVERTISEMENT

ಕುಟುಂಬದ ದುಡಿಯುವ ಕೈಗಳೇ ಇಲ್ಲವಾಗಿರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಮನೆಯಿಂದ ಒಂದು ಬಾರಿಯೂ ಹೊರಗಡೆ ಹೋಗದ ಕುಟುಂಬ ಸದಸ್ಯರಿಗೀಗ ಅನಿವಾರ್ಯವಾಗಿ ಎಲ್ಲವನ್ನೂ ನಿಭಾಯಿಸುವ ಹೊಣೆ ಎದುರಾಗಿದೆ.

ಧಾರವಾಡ ಜಿಲ್ಲೆಯ ಚಿಕ್ಕಗುಂಜಳ ಗ್ರಾಮದಲ್ಲಿನ ಕುಟುಂಬದವೊಂದರ ಮೂವರೂ ಸಹೋದರರು ಕೋವಿಡ್‌ನಿಂದ ಮೃತರಾಗಿದ್ದಾರೆ. ‘ಕೃಷಿ ಮಾಡಲು ಎರಡು ತಿಂಗಳ ಹಿಂದಷ್ಟೇ ಟ್ರಾಕ್ಟರ್ ಖರೀದಿಸಲಾಗಿತ್ತು. ಈಗ ವ್ಯವಸಾಯ ಮಾಡುವವರು ಯಾರೂ ಇಲ್ಲದ್ದರಿಂದ ವಾಪಸ್‌ ಷೋ ರೂಂನವರಿಗೆ ನೀಡಲಾಗಿದೆ. ದೇವರು ಬಹಳ ಕಷ್ಟ ಕೊಟ್ಟು ಬಿಟ್ಟ’ ಎಂದು ಅವರ ಸಂಬಂಧಿ ಬಸನಗೌಡ ಪಾಟೀಲ ತಿಳಿಸಿದರು.

ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಸರ್ಕಾರ ₹1 ಲಕ್ಷ ಪರಿಹಾರ ಘೋಷಿಸಿರುವುದು ಸ್ವಲ್ಪಸಮಾಧಾನ ತಂದಿದೆ. ‘ಪೋಷಕ
ರಿಬ್ಬರನ್ನೂ ಕಳೆದುಕೊಂಡಿರುವ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಹೊಣೆ ಯನ್ನು ಸರ್ಕಾರವೇ ಹೊರಲಿದೆ. ಏಕ ಪೋಷಕರಾದ ಮಕ್ಕಳಿಗೂ ವಸತಿ ನಿಲಯಗಳಲ್ಲಿ ಇರುವ ವ್ಯವಸ್ಥೆ, ಶಿಕ್ಷಣ ಪಡೆಯಲು ಅವಕಾಶ ಮಾಡಿ ಕೊಡಲಾಗುತ್ತಿದೆ. ‘ಪ‍್ರಾಯೋಜಕತ್ವ’ ಯೋಜನೆಯಡಿ ಕೆಲವರಿಗೆ ಆರ್ಥಿಕ ನೆರವು ದೊರೆಯಲಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.