ADVERTISEMENT

ಧಾರವಾಡ | 167 ಅನಧಿಕೃತ ಬಡಾವಣೆ; ತೆರವಿಗೆ ಕ್ರಮ ವಹಿಸಿ: ಸಂತೋಷ್‌ ಲಾಡ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 15:59 IST
Last Updated 21 ಏಪ್ರಿಲ್ 2025, 15:59 IST
ಧಾರವಾಡದಲ್ಲಿ ಸೋಮವಾರ ನಡೆದ ಜನತಾದರ್ಶನದಲ್ಲಿ ಸಚಿವ ಸಂತೋಷ್‌ ಲಾಡ್‌ ಅವರು ಜನರ ಅಹವಾಲು ಸ್ವೀಕರಿಸಿದರು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ಸೋಮವಾರ ನಡೆದ ಜನತಾದರ್ಶನದಲ್ಲಿ ಸಚಿವ ಸಂತೋಷ್‌ ಲಾಡ್‌ ಅವರು ಜನರ ಅಹವಾಲು ಸ್ವೀಕರಿಸಿದರು ಪ್ರಜಾವಾಣಿ ಚಿತ್ರ   

ಧಾರವಾಡ: ‘ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದವರು (ಹುಡಾ) ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 167 ಅನಧಿಕೃತ ಬಡಾವಣೆ (ಲೇಔಟ್‌) ಗುರುತಿಸಿದ್ದಾರೆ. ಈ ಬಡಾವಣೆಗಳ ತೆರವಿಗೆ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋ‌ಷ್‌ ಲಾಡ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಒಂಬತ್ತನೇ ಜನತಾ ದರ್ಶನದಲ್ಲಿ ಮಾತನಾಡಿದರು.

‘ಅನಧಿಕೃತ ಲೇಔಟ್‌ಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು. ಮಹಾನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಜಾಗಗಳ ಒತ್ತುವರಿ, ಅನಧಿಕೃತ ಕಟ್ಟಡ, ಅನಧಿಕೃತ ವಸತಿ ವಿನ್ಯಾಸ ಹೆಚ್ಚಾಗಿದೆ. ಪಾಲಿಕೆ, ಜಿಲ್ಲಾಡಳಿತ, ಹುಡಾ, ಪೊಲೀಸ್ ಹಾಗೂ ಇತರ ಏಜೆನ್ಸಿಗಳ ಸಭೆ ನಡೆಸಬೇಕು. ಅನಧಿಕೃತ ಕಟ್ಟಡದ ಮಾಲೀಕರು, ಒತ್ತುವರಿದಾರರಿಗೆ ನೋಟಿಸ್ ನೀಡಬೇಕು’ ಎಂದರು ತಿಳಿಸಿದರು.

ADVERTISEMENT

‘ಒತ್ತುವರಿದಾರರು ತಾವಾಗಿ ಒತ್ತುವರಿ ತೆರವುಗೊಳಿಸದಿದ್ದರೆ ಪಾಲಿಕೆಯಿಂದ ಒತ್ತುವರಿ ತೆರವು ಹಾಗೂ ಅನಧಿಕೃತ ಕಟ್ಟಡ, ಲೇಜೌಟ್ ತೆರವಿಗೆ ಕಾರ್ಯಚರಣೆ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೂರಕ ಸಿದ್ಧತೆ ಮಾಡಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಹುಡಾದ 400 ಎಕರೆ ಹಾಗೂ ಪಾಲಿಕೆಯ 300 ಎಕರೆ ಉದ್ಯಾನ ಜಾಗ ಇದೆ. ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಉತ್ತಮವಾಗಿ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಬೇಕು’ ಎಂದರು.

‘ಪ್ರತಿ ಜನತಾ ದರ್ಶನದಲ್ಲಿ ಪಾಲಿಕೆ ವ್ಯಾಪ್ತಿಯ ಅಹವಾಲುಗಳು ಹೆಚ್ಚು ಸಲ್ಲಿಕೆಯಾಗುತ್ತಿವೆ. ವಿವಿಧ ಸ್ಥಳೀಯ ಪ್ರಾಧಿಕಾರ, ಇಲಾಖೆಗಳಲ್ಲಿ ಸಮನ್ವಯ ಇಲ್ಲದಿರುವುದು ಇದಕ್ಕೆ ಕಾರಣ. ಪಾಲಿಕೆ ಆಯುಕ್ತರು, ವಲಯ ಸಹಾಯಕ ಆಯುಕ್ತರು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ವಾರ್ಡ್‌ಗಳಿಗೆ ತೆರಳಿ ಸಾರ್ವಜನಿಕ ಪರಿಶೀಲಿಸಬೇಕು’ ಎಂದು ಸೂಚನೆ ನೀಡಿದರು.

‘ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಗಮನಿಸಿದಾಗ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದಿರುವುದು ಕಂಡುಬರುತ್ತಿದೆ. ಕೆಲವು ಅಹವಾಲುಗಳು ಜನತಾ ದರ್ಶನದಲ್ಲಿ ಮತ್ತೆ ಮತ್ತೆ ಸಲ್ಲಿಕೆ ಆಗುತ್ತಿವೆ. ಅವುಗಳಿಗೆ ಬರಿ ಹಿಂಬರಹ ನೀಡಿ, ಹೊತ್ತು ಹಾಕಬೇಡಿ, ಪರಿಹಾರ ಸೂಚಿಸಿ ತ್ವರಿತವಾಗಿ ವಿಲೇವಾರಿ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ನೋಟಿಸ್‌ ಜಾರಿಗೆ ಸೂಚನೆ: ಕೆಲ ಅಧಿಕಾರಿಗಳು ಗೈರುಹಾಜರಾಗಿವುದಕ್ಕೆ ಸಚಿವರು ಕುಪಿತರಾದರು. ಸಭೆಯಿಂದ ಅರ್ಧಕ್ಕೆ ಹೋಗಿದ್ದ ಕೆಲವು ಅಧಿಕಾರಿಗಳನ್ನು ಮರಳಿ ಕರೆಸಿ, ಎಚ್ಚರಿಕೆ ನೀಡಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಡಿಸಿಪಿ ಮಾನಿಂಗ ನಂದಗಾವಿ ಇದ್ದರು.

125 ಅಹವಾಲು ಸಲ್ಲಿಕೆ
ಜನತಾ ದರ್ಶನದಲ್ಲಿ ಒಟ್ಟು 125 ಅಹವಾಲುಗಳು ಸಲ್ಲಿಕೆಯಾಗಿವೆ. ಕಂದಾಯ 31 ಮಹಾನಗರ ಪಾಲಿಕೆ 26 ಜಿಲ್ಲಾ ಪಂಚಾಯಿತಿ 18 ಕಾರ್ಮಿಕ ಇಲಾಖೆ 16 ಪೊಲೀಸ್ ಇಲಾಖೆ 6 ಶಿಕ್ಷಣ ಇಲಾಖೆ 5 ಮತ್ತು ಇತರ23 ಅಹವಾಲು ಸಲ್ಲಿಕೆಯಾಗಿವೆ. ಪೋಡಿ ಸಮಸ್ಯೆ ದಾರಿ ಸಮಸ್ಯೆ ಅನಧಿಕೃತ ಕಟ್ಟಡ ಉದ್ಯೋಗ ಮೊದಲಾದವುಗಳಿಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗಿವೆ. ‘ಕಂಡಕ್ಟರ್‌ ಕೆಲಸ ಬೇಡ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೊಡಿ’ ಎನ್‌ಡಬ್ಲುಕೆಆರ್‌ಟಿಸಿಯಲ್ಲಿ ಅನುಕಂಪ ಆಧಾರದ ಹುದ್ದೆಗೆ ಅರ್ಜಿ ಸಲ್ಲಿಸಿದವರೊಬ್ಬರು ಕಂಡಕ್ಟರ್‌ ಕೆಲಸ ಬೇಡ ಸೆಕ್ಯುರಿಟಿ ಕೆಲಸ ಕೊಡಿ ನನಗೆ ‘ಯುರಿಕ್‌ ಆಸಿಡ್’ ಸಮಸ್ಯೆ ಇದೆ ಎಂದು ಅಹವಾಲು ಸಲ್ಲಿಸಿದರು. ‘ಯುರಿಕ್ ಆಸಿಡ್‌ ಸಮಸ್ಯೆ ಇದ್ದರೆ ನೀರು ಕಡಿಮೆ ಕುಡಿಯಬೇಕು ಚಿಕನ್‌ ಮಟನ್‌ ತಿನ್ನಬಾರದು. ಕಂಡಕ್ಟರ್‌ ಆದ್ರೆ ಮಾರ್ಯಾದೆ ಹೋಗುತ್ತಾ? ಸರ್ಕಾರಿ ಕೆಲಸ ಸಿಕ್ಕಿದೆ ಒಪ್ಪಿಕೊಂಡು ಮಾಡಿ. ಇಲ್ಲದಿದ್ದರೆ ಸೆಕ್ಯುರಿಟಿ ಕೆಲಸ ಸಿಗುವವರೆಗೆ ಕಾಯಿರಿ’ ಎಂದು ಸಂತೋಷ್‌ ಲಾಡ್‌ ತಿಳಿಸಿದರು. ಮೂಲಸೌಕರ್ಯಕ್ಕೆ ಮೊರೆ: ಹುಬ್ಬಳ್ಳಿಯ ಕನ್ಯಾನಗರದಲ್ಲಿ 209 ಕುಟುಂಬಗಳಿವೆ. ನಮಗೆ ಹಕ್ಕುಪತ್ರ ನೀಡಿಲ್ಲ ಈ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂದು ನಿವಾಸಿಗಳು ಮನವಿ ಮಾಡಿದರು. ಪರಿಶೀಲಿಸಿ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸುವುದಾಗಿ ತಿಳಿಸಿದರು. ‘ಹಾರ್ಮೊನ್‌ ಗ್ರೋಥ್‌’ ಚುಚ್ಚುಮದ್ದು ಕೊಡಿಸಲು ಮನವಿ: ‘ಎಂಟು ವರ್ಷದ ಪುತ್ರಿಗೆ ಹಾರ್ಮೊನ್‌ ಗ್ರೋಥ್‌ ಚುಚ್ಚುಮದ್ದು ಕೊಡಿಸಬೇಕಿದೆ. ಕಳೆದ ಜನತಾ ದರ್ಶನದಲ್ಲಿ ಚುಚ್ಚುಮದ್ದು ನೀಡಲು ತಿಳಿಸಿದರೂ ಸಂಬಂಧಪಟ್ಟವರು ಕ್ರಮ ವಹಿಸಿಲ್ಲ’ ಎಂದು ಭೈರಿದೇವರಕೊಪ್ಪದ ಸಂತೋಷ ಮನವಿ ಮಾಡಿದರು. ಸಂತೋಷ್‌ ಲಾಡ್‌ ಅವರು ಕಿಮ್ಸ್‌ ನಿರ್ದೇಶಕರಿಗೆ ಫೋನ್‌ನಲ್ಲಿ ಮಾತನಾಡಿದರು. ಚುಚ್ಚುಮದ್ದು ಕೊಡಿಸಲು ಸೂಚನೆ ನೀಡುವುದಾಗಿ ಅವರಿಗೆ ಸಚಿವ ಲಾಡ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.