ADVERTISEMENT

ಹೊಸ ಜೀವನಕ್ಕೆ ಕಾಲಿಟ್ಟ 27 ಜೋಡಿ

ಹಳೇ ಹುಬ್ಬಳ್ಳಿಯ ಜಗದೀಶನಗರ, ಬೆಂಗೇರಿಯಲ್ಲಿ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 10:34 IST
Last Updated 21 ಫೆಬ್ರುವರಿ 2019, 10:34 IST
ಹುಬ್ಬಳ್ಳಿ ಜಗದೀಶನಗರದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳಿಗೆ ಶಾಸಕ ಜಗದೀಶ ಶೆಟ್ಟರ್, ಸ್ವಾಮೀಜಿಗಳು ಹಾಗೂ ಸ್ಥಳೀಯ ಮುಖಂಡರು ಹರಸಿದರು
ಹುಬ್ಬಳ್ಳಿ ಜಗದೀಶನಗರದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳಿಗೆ ಶಾಸಕ ಜಗದೀಶ ಶೆಟ್ಟರ್, ಸ್ವಾಮೀಜಿಗಳು ಹಾಗೂ ಸ್ಥಳೀಯ ಮುಖಂಡರು ಹರಸಿದರು   

ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯ ಜಗದೀಶನಗರ ಮತ್ತು ಬೆಂಗೇರಿಯಲ್ಲಿ ಗುರುವಾರ ಪ್ರತ್ಯೇಕವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ 27 ಜೋಡಿ ಸಾಮೂಹಿಕ ವಿವಾಹದ ಮೂಲಕ, ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟರು.

ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಟ್ರಸ್ಟ್‌ ಮತ್ತು ಶಿಕ್ಕಲಗಾರ ಸಮಾಜ ಸೇವಾ ಸಂಘವು ಜಗದೀಶನಗರದಲ್ಲಿ ದೇವಸ್ಥಾನದ ಕಳಸಾರೋಹಣ, ಜಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವದ ಅಂಗವಾಗಿ 21 ಜೋಡಿಗಳ ವಿವಾಹ ನಡೆಯಿತು.

ಮಾರುತಿ ದೇವಸ್ಥಾನ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ನೂತನ ಮಾರುತಿ ವಿಗ್ರಹ ಪ್ರತಿಷ್ಠಾಪನೆ, ನವೀಕೃತ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣದ ಅಂಗವಾಗಿ, ಬೇಗೇರಿಯಲ್ಲಿ 6 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು.

ADVERTISEMENT

ತಗ್ಗಲಿದೆ ಆರ್ಥಿಕ ಹೊರೆ:ಎರಡೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಧು–ವರರನ್ನು ಹರಸಿದ ಶಾಸಕ ಜಗದೀಶ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ ಜೋಶಿ, ‘ಮದುವೆ ಹೆಸರಿನಲ್ಲಿ ನಡೆಯುವ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲಿನ ಆರ್ಥಿಕ ಹೊರೆ ತಗ್ಗಲಿದೆ’ ಎಂದರು.

240 ಮನೆ ನಿರ್ಮಾಣ- ಶೆಟ್ಟರ್:‘ಕೊಳೆಗೇರಿ ಪ್ರದೇಶವಾಗಿರುವ ಜಗದೀಶನಗರದಲ್ಲಿರುವ 240 ಗುಡಿಸಲುಗಳನ್ನು ತೆರವು ಮಾಡಿ, ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಸುಸಜ್ಜಿತವಾದ ಆರ್‌ಸಿಸಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಮಂಜೂರಾಗಿದೆ. ಕೆಲವೇ ವಾರಗಳಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಜಗದೀಶನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ನಿನೌರಾದ ಭಾಗವತ ಭಾಸ್ಕರ ಗುರುಪೀಠದ ಮಿಥಿಲೇಶ ಮಹಾರಾಜರು ಮೆಹತಾ (ನಾಗರ) ಆಶೀರ್ವಚನ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಖುರ್ದ ಕಂಚನಳ್ಳಿ ನಿತ್ಯಾನಂದ ಸ್ವಾಮಿ ಆಶ್ರಮದ ಸದ್ಗುರು ಸುಬ್ರಮಣ್ಯ ಸ್ವಾಮೀಜಿ, ಗೋಕುಲದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮೋಹನ ಗುರು ಸ್ವಾಮಿ ಹಾಗೂ ಬೆಂಗಳೂರಿನ ಎಚ್‌.ಆರ್‌. ಸಂಪತ್‌ಕುಮಾರ ಗುರುಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ಸ್ಥಳೀಯ ಶಿಕ್ಕಲಗಾರ ಸಮಾಜದ ಅಧ್ಯಕ್ಷ ದುರ್ಗಪ್ಪ ಎಸ್. ಮುದ್ದಿ, ಅಖಿಲ ಕರ್ನಾಟಕ ಶಿಕ್ಕಲಗಾರ ಸಮಾಜದ ಅಧ್ಯಕ್ಷ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ದಶರಥ ಎಂ. ವಾಲಿ, ಉಪಾಧ್ಯಕ್ಷರಾದ ಮಂಜುನಾಥ ಬ್ಯಾಡಗಿ, ಹರೀಶ ಜಂಗಲಿ, ಪ್ರಧಾನ ಕಾರ್ಯದರ್ಶಿ ಸಂಜು ಜಂಗಲಿ, ಖಜಾಂಚಿ ಕಿಶನ್ ಬಿಲಾನಾ, ಪಾಲಿಕೆ ಸದ್ಯ ಲಕ್ಷ್ಮಣ ಗಂಡಗಾಳೇಕರ ಇದ್ದರು.

ಬೆಂಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನವಲಗುಂದದ ಗವಿಮಠದ ಬಸವಲಿಂಗ ಸ್ವಾಮೀಜಿ, ‘ಮಾರುತಿ ದೇವಸ್ಥಾನದ ಮಹಾದ್ವಾರಕ್ಕೆ ₹25 ಲಕ್ಷ ಆರ್ಥಿಕ ನೆರವು ಒದಗಿಸಿ’ ಎಂದು ಶಾಸಕ ಜಗದೀಶ ಶೆಟ್ಟರ್‌ಗೆ ಮನವಿ ಮಾಡಿದರು.

ರೇವಣಸಿದ್ಧೇಶ್ವರ ಮಹಾಮಠದ ಬಸವರಾಜ ದೇವರು ಆಶೀರ್ವಚನ ನೀಡಿದರು. ಜಗದೀಶ ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ, ಮಾರುತಿ ದೇವಸ್ಥಾನ ಟ್ರಸ್ಟ್ ಕಮಿತಿ ಗೌರವ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ, ಟ್ರಸ್ಟ್ ಮಾಜಿ ಮುಖ್ಯಸ್ಥ ಹನುಮಂತಪ್ಪ ಚ. ಹೋಳಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಹೂವಪ್ಪ ದಾಯಗೋಡಿ, ಸ್ಥಳೀಯರಾದ ಬವಸವಣ್ಣೆಪ್ಪ ಮೆಣಸಿನಕಾಯಿ, ಜಂಪನಗೌಡ ಸೋಮನಗೌಡ್ರ, ಎಂ.ವೈ. ನರಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.