ADVERTISEMENT

ಹು–ಧಾ ಪಾಲಿಕೆಯಿಂದ 26ರಂದು ರಾಷ್ಟ್ರಪತಿಗೆ ಪೌರ ಸನ್ಮಾನ: 5,000 ಮಂದಿಗೆ ಆಹ್ವಾನ

ಮಹಾನಗರ ಪಾಲಿಕೆಯಿಂದ ಸೆ. 26ಕ್ಕೆ ರಾಷ್ಟ್ರಪತಿಗೆ ಪೌರ ಸನ್ಮಾನ: ಮೇಯರ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 12:44 IST
Last Updated 18 ಸೆಪ್ಟೆಂಬರ್ 2022, 12:44 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು    

ಹುಬ್ಬಳ್ಳಿ: ‘ಮಹಾನಗರ ಪಾಲಿಕೆ ವತಿಯಿಂದ ಸೆ. 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಮ್ಮಿಕೊಂಡಿರುವ ಪೌರ ಸನ್ಮಾನ ಸಮಾರಂಭಕ್ಕೆ ಐದು ಸಾವಿರ ಮಂದಿಗೆ ಆಹ್ವಾನ ನೀಡಲಾಗುವುದು’ ಎಂದು ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಹೇಳಿದರು.

‘ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ಸಮಾರಂಭ ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸಚಿವರಾದ ಹಾಲಪ್ಪ ಆಚಾರ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಜಗದೀಶ ಶೆಟ್ಟರ್, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ಸಿ.ಎಂ. ನಿಂಬಣ್ಣವರ ಹಾಗೂ ಪಾಲಿಕೆ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

‘ಅವಳಿನಗರದ ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು ಐದು ಸಾವಿರ ಮಂದಿಗೆ ಸಮಾರಂಭಕ್ಕೆ ಆಹ್ವಾನ ನೀಡಲಾಗುವುದು. ಜೊತೆಗೆ, 500 ಪೌರ ಕಾರ್ಮಿಕರಿಗೂ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಬೆಳ್ಳಿ ಮೂರ್ತಿ ಕಾಣಿಕೆ: ‘ಪೌರ ಸನ್ಮಾನದ ನೆನೆಪಿನ ಕಾಣಿಕೆಯಾಗಿ ರಾಷ್ಟ್ರಪತಿ ಅವರಿಗೆ ಸಿದ್ಧಾರೂಢ ಸ್ವಾಮೀಜಿಯ ಬೆಳ್ಳಿ ಮೂರ್ತಿಯನ್ನು ನೀಡಲಾಗುವುದು. ದ್ರೌಪದಿ ಮುರ್ಮು ಅವರು ಅವಳಿನಗರಕ್ಕೆ ಭೇಟಿ ನೀಡುತ್ತಿರುವ ಮೂರನೇ ರಾಷ್ಟ್ರಪತಿಯಾಗಿದ್ದಾರೆ. ಹಿಂದೆ, ಧಾರವಾಡಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಹುಬ್ಬಳ್ಳಿಗೆ ಎ.ಪಿ.ಜೆ. ಅಬ್ದುಲ್ ಕಲಾಂ ಭೇಟಿ ನೀಡಿದ್ದರು. ಈ ಪೈಕಿ, ಪೌರ ಸನ್ಮಾನ ಸ್ವೀಕರಿಸುತ್ತಿರುವ ಮೊದಲ ರಾಷ್ಟ್ರಪತಿ ಮುರ್ಮು ಅವರಾಗಿದ್ದಾರೆ’ ಎಂದು ಹೇಳಿದರು.

‘ಸುಮಾರು 70 ನಿಮಿಷದ ಕಾರ್ಯಕ್ರಮವು ಬೆಳಿಗ್ಗೆ 11ಕ್ಕೆ ಶುರುವಾಗಲಿದೆ. ಇಲ್ಲಿನ ಕಾರ್ಯಕ್ರಮ ಮುಗಿದ ನಂತರ ರಾಷ್ಟ್ರಪತಿ ಅವರು ಧಾರವಾಡದ ಐಐಐಟಿಗೆ ಕ್ಯಾಂಪಸ್‌ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸಮಾರಂಭ ನಡೆಯಲಿರುವ ಮೈದಾನದಲ್ಲಿ ಈಗಾಗಲೇ ತಯಾರಿ ಆರಂಭಿಸಲಾಗಿದೆ. ನಗರದ ಸ್ವಚ್ಛತೆ, ಸೌಂದರ್ಯೀಕರಣ ಹಾಗೂ ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಾಹನಗಳ ನಿಲುಗಡೆಗೆ ಕಿಮ್ಸ್ ಮೈದಾನ, ಸುತ್ತಮುತ್ತಲಿನ ಶಾಲೆಗಳ ಮೈದಾನ ಸೇರಿದಂತೆ ವಿವಿಧ ಸ್ಥಳಗಳನ್ನು ಗುರುತಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಉಪ ಮೇಯರ್ ಉಮಾ ಮುಕುಂದ, ವಿರೋಧ ಪಕ್ಷದ ನಾಯಕ ದೊರೈರಾಜ ಮಣಿಕುಟ್ಲಾ, ಸದಸ್ಯರಾದ ವೀರಣ್ಣ ಸವಡಿ, ಶಿವು ಮೆಣಸಿನಕಾಯಿ, ಶಿವು ಹಿರೇಮಠ, ಸಂತೋಷ ಚವ್ಹಾಣ, ಚಂದ್ರಿಕಾ ಮೇಸ್ತ್ರಿ, ಸುವರ್ಣಾ ಮಣಿಕುಂಟ್ಲಾ ಇದ್ದರು.

‘ನಾವೇ ಬೀಗ ತೆಗೆಯುತ್ತೇವೆ’

‘ಗಣೇಶೋತ್ಸವದ ನಂತರದ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಈದ್ಗಾ ಮೈದಾನದ ದ್ವಾರಗಳಿಗೆ ಬೀಗ ಹಾಕಿದ್ದಾರೆ. ದ್ವಾರಗಳನ್ನು ತೆಗೆದು ವಾಹನಗಳ ನಿಲುಗಡೆ ಸೇರಿದಂತೆ ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶ ನೀಡುವಂತೆ ಪೊಲೀಸರಿಗೆ ತಕ್ಷಣ ಸೂಚಿಸಲಾಗುವುದು. ಇಲ್ಲದಿದ್ದರೆ, ಎರಡು ದಿನದೊಳಗೆ ನಾವೇ ಬೀಗ ತೆಗೆಯುತ್ತೇವೆ’ ಎಂದು ಮೇಯರ್ ಈರೇಶ ಅಂಚಟಗೇರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.