ಧಾರವಾಡ: ‘ಶರಣರ, ಸಂತರ, ದಾರ್ಶನಿಕರ, ಮಹಾತ್ಮರ ಮಹತ್ವದ ಸಂದೇಶಗಳು ನಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತವೆ. ಬಸವಣ್ಣ, ಮಹಾವೀರ, ಬುದ್ಧ, ಪೈಗಂಬರ್, ಯೇಸು ಇವರೆಲ್ಲರೂ ದೇವರಲ್ಲ. ಆದರೆ, ಇವರು ಜಗತ್ತಿನ ಕಲ್ಯಾಣಕ್ಕಾಗಿ ಶ್ರಮಿಸಿದ ಗುರುಗಳು’ ಎಂದು ನಿಜಗುಣಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಬಸವ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ’ಜ್ಞಾನದ ಪ್ರಕಾಶ ದೊರೆತರೆ, ಅಜ್ಞಾನದ ಅಂಧಕಾರ ದೂರವಾಗಲು ಸಾಧ್ಯ. ಸುಜ್ಞಾನದ ಮಾರ್ಗದರ್ಶನ ಮಾಡಿದವರು ನಮಗೆ ಗುರುವಾಗುತ್ತಾರೆ’ ಎಂದು ಅವರು ಹೇಳಿದರು.
‘ಮಹಾತ್ಮರು ಯಾರು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನ ಕಲ್ಯಾಣದ ಜತೆಗೆ ಸಮಾಜದ ಉದ್ಧಾರಕ್ಕಾಗಿ ಸತ್ಕಾರ್ಯ ಮಾಡುತ್ತಾರೋ ಅಂತವರು ಮಹಾತ್ಮರು, ಮಾರ್ಗದರ್ಶಕರು, ಗುರುವಾಗುತ್ತಾರೆ.
ಮನುಷ್ಯನ ಬೇಕು, ಬೇಡಗಳನ್ನು ತಿಳಿಸುವ, ತನಗೆ ತಿಳಿಯಲಾರದ್ದನ್ನು ತಿಳಿದುಕೊಳ್ಳುವ, ತಿಳಿದ್ದನ್ನು ತಿಳಿಸುವ ಮಹತ್ವ ಪೂರ್ಣ ಕಾರ್ಯ ಮಾಡುವುದೇ ಗುರುವಿನ ಕೆಲಸ’ ಎಂದು ಅವರು ತಿಳಿಸಿದರು. ‘ಗುರುವಾಗುವವನು ತನ್ನ ತಾ ತಿಳಿದಿರಬೇಕು. ತನ್ನ ತಾ ತಿಳಿಯದವನು ಮತ್ತೊಬ್ಬನ ಸ್ವರೂಪ ತಿಳಿಸಲು ಸಾಧ್ಯವಿಲ್ಲ’ ಎಂದು ನಿಜಗುಣಪ್ರಭು ಸ್ವಾಮೀಜಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.