ಧಾರವಾಡ: ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಸ್ವಾಭಿಮಾನ ಸಂಗ್ರಾಮದ 200ನೇ ವಿಜಯೋತ್ಸವಕ್ಕೆ ತೆರಳುತ್ತಿದ್ದ ದಲಿತರ ಮೇಲೆ ಆರ್ಎಸ್ಎಸ್ ಪ್ರೇರಿತ ಕೆಲವು ಕೋಮುವಾದಿ ಸಂಘಟನೆಗಳು ಹಲ್ಲೆ ನಡೆಸಿವೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಘಟನೆಯಲ್ಲಿ ದಲಿತರ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದ್ದು, ನೂರಾರು ದಲಿತರು ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಜಾತಿವಾದಿ, ಕೋಮುವಾದಿ ಸಂಘಟನೆಗಳು ದಲಿತರ ಸ್ವಾಭಿಮಾನವನ್ನು ಕೆಣಕುತ್ತಿವೆ. ಇಷ್ಟೆಲ್ಲ ಘಟನೆಗಳಾದರೂ ಶೋಷಿತ ವರ್ಗಗಳ ಜನರು ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದಾರೆ. ಹಿಂಸೆಗೆ ಪ್ರಚೋದನೆ ನೀಡಿದ ಆರ್.ಎಸ್.ಎಸ್. ಹಾಗೂ ಬಲಪಂಥೀಯ ಸಂಘಟನೆಗಳ ವಿರುದ್ದ ಈ ಕೂಡಲೇ ಮಹಾರಾಷ್ಟ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಲಕ್ಷ್ಮಣ ಬ. ದೊಡಮನಿ, ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ ಈ. ದೊಡಮನಿ, ನಾರಾಯಣ ಮಾದರ, ಹನುಮಂತ ಮೊರಬ, ಶಬ್ಬೀರ ಅತ್ತಾರ, ನಿಂಗರಾಜ ಅಂದರಖಂಡಿ, ಪ್ರಕಾಶ ಹೂಗಾರ, ರಾಮಣ್ಣ ಎಂ., ಕಿಶೋರ ಕಟ್ಟಿ ಗಾಹಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.