ಧಾರವಾಡ: ಹಾಡಹಗಲೇ ಇಲ್ಲಿನ ತಹಶೀಲ್ದಾರ್ ಕಚೇರಿ ಬಳಿ ಇಬ್ಬರು ಅಪರಿಚಿತರು, ವಕೀಲರೊಬ್ಬರ ಮೇಲೆ ಸೋಮವಾರ ಮಚ್ಚು, ಲಾಂಗ್ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತಾಲ್ಲೂಕಿನ ಹೊನ್ನಾಪುರ ಮೂಲದ ಬಿ.ಐ.ದೊಡ್ಡಮನಿ ಎಂಬುವವರೇ ಹಲ್ಲೆಗೊಳಗಾದ ವಕೀಲ. ತೋಟಗಾರಿಕಾ ಇಲಾಖೆ ಎದುರು ಇರುವ ತಮ್ಮ ಕಚೇರಿಗೆ ಎಂದಿನತೆ ಬಂದ ದೊಡ್ಡಮನಿ ಅವರನ್ನು ಬೆನ್ನಟ್ಟಿದ ಇಬ್ಬರು ಅಪರಿಚಿತರು, ಮಾರಕಾಸ್ತ್ರಗಳನ್ನು ಹಿಡಿದು ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ತಮ್ಮ ಕಣ್ಣೆದುರೇ ನಡೆದ ಹಲ್ಲೆ ಕಂಡು ಬೆಚ್ಚಿ ಬಿದ್ದು ಓಡಿ ಹೋಗಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಹಲ್ಲೆ ದೃಶ್ಯಗಳು ದಾಖಲಾಗಿವೆ.
ಹಲ್ಲೆ ನಂತರ ಪ್ರಾಣಭೀತಿಯಿಂದ ತಹಶೀಲ್ದಾರ್ ಕಚೇರಿ ಎದುರು ಇರುವ ಗ್ರಾಮೀಣ ಠಾಣೆಗೆ ಓಡಿ ಹೋಗಿ ರಕ್ಷಣೆ ಕೋರಿದ್ದಾರೆ. ತಕ್ಷಣವೇ ಅವರನ್ನು ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸಿಪಿ ಎಂ.ಎನ್.ರುದ್ರಪ್ಪ ಹಾಗೂ ವಿದ್ಯಾಗಿರಿ ಠಾಣೆ ಇನ್ಸ್ಪೆಕ್ಟರ್ ಮಹಾಂತೇಶ ಹೊಸಪೇಟ, ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದೇವೆ. ಇಬ್ಬರು ಹಲ್ಲೆ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ, ಹಲ್ಲೆಗೆ ಕಾರಣ ಏನು ಎಂಬುದನ್ನು
ಇನ್ನಷ್ಟೇ ತಿಳಿಯಬೇಕಾಗಿದೆ’ ಎಂದು ತಿಳಿಸಿದರು
ಬಿ.ಐ.ದೊಡ್ಡಮನಿ ವಿರುದ್ಧ ಹಲವು ಪ್ರಕರಣಗಳು ಈ ಹಿಂದೆ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದವು. ರೌಡಿ ಶೀಟರ್ ಪಟ್ಟಿಯಲ್ಲೂ ಇವರ ಹೆಸರು ಇತ್ತು. ಆದರೆ, ನಂತರ ಅದರಿಂದ ಅವರು ಖುಲಾಸೆಯಾದರು. 2012ರಲ್ಲಿ ತಮ್ಮ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ದೊಡ್ಡಮನಿ ಅವರು ದೂರು ದಾಖಲಿಸಿದ್ದರು. ಈಗ ಅರಣ್ಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣ ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.