ಅಳ್ನಾವರ: ಮಲೆನಾಡಿನ ಸೆರಗಿನ ದಟ್ಟ ಅರಣ್ಯ ಪ್ರದೇಶದಲ್ಲಿರುವ ಕಂಬಾರಗಣವಿ ಗ್ರಾಮದ ಹೊರ ವಲಯದ ಬಳಿ ಇರುವ ಸೇತುವೆ ಗ್ರಾಮಸ್ಥರ ಪಾಲಿಗೆ ಮುಳುವಾಗಿದೆ.
ಗ್ರಾಮದ ಹೊರ ವಲಯದ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿದ ಸೇತುವೆ ಪದೇ ಪದೇ ಅವಘಡಕ್ಕೆ ಸಾಕ್ಷಿಯಾಗಿ ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಸೇತುವೆ ತೀರಾ ಕೆಳ ಮಟ್ಟದಲ್ಲಿದ್ದು,ಮಳೆ ಬಂದರೆಗ್ರಾಮದ ಸಂಪರ್ಕವೇ ಕಡತವಾಗುತ್ತದೆ.ಸೇತುವೆ ಮೇಲೆನೀರು ಹರಿದು ಸಂಚಾರ ಸಂಪೂರ್ಣ ಬಂದ್ ಆಗುತ್ತದೆ. ಜನ ನಡುಗಡ್ಡೆಯಲ್ಲಿ ಬದುಕು ಸಾಗಿಸುವಂತಾಗುತ್ತದೆ.
ಮಂಗಳವಾರ ಸುರಿದ ಮಳೆಯಿಂದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಮಳೆ ನೀರಿನ ಜೊತೆ ಕಸ, ಕಂಟೆಗಳು ಸೇತುವೆಗೆ ಸಿಕ್ಕ ಪರಿಣಾಮ ಮಳೆ ನೀರು ಹರಿಯದೆ ರಸ್ತೆಸಂಚಾರ ಗುರುವಾರ ಬೆಳಗಿನ ಜಾವದವರೆಗೆ ಬಂದ್ ಆಗಿತ್ತು. ಈ ಕುರಿತು ಹೊನ್ನಾಪೂರ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿ ಕಸ ತೆರವು ಮಾಡಲು ವಿನಂತಿಸಿದರೂ ಪ್ರಯೋಜನ ಆಗಲಿಲ್ಲ.
ಆದರೆ,ಜನರೇ ಸ್ವಂತ ವಂತಿಕೆ ಕೂಡಿಸಿ ಜೆಸಿಬಿ ಯಂತ್ರ ಬಳಸಿ ಕಸ ತೆಗೆದು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು ಎಂದುಗ್ರಾಮದ ಯುವಕರಾದ ಇಮ್ರಾನ್ ರಾಣೆಬೆನ್ನೂರ ಪ್ರಜಾವಾಣಿಗೆತಿಳಿಸಿದರು.
ಜಿಲ್ಲಾ ಕೇಂದ್ರ ಸ್ಥಾನ ಧಾರವಾಡದಿಂದ ಸಮೀಪದಲ್ಲಿರುವ ಈ ಗ್ರಾಮಮಳೆಗಾಲದಲ್ಲಿ ಹೊರ ಪ್ರಪಂಚದ ಸಂಪರ್ಕ ಕಳೆದುಕೊಳ್ಳುತ್ತದೆ. ಅಗತ್ಯ ವಸ್ತು ಹಾಗೂ ವೈದ್ಯಕೀಯಸೇವೆಗೆಜನ ಪಡಿಪಾಟಲು ಪಡಬೇಕಾಗುತ್ತದೆ. ವಿಶೇಷವಾಗಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಜನ ಬಹಳಷ್ಟು ಸಮಸ್ಯೆ ಎದುರಿಸಿದ್ದಾರೆ. ಮೊದಲ ಅಲೆ ಬಂದಾಗ ಸೋಂಕಿತರನ್ನು ಸಕಾಲದಲ್ಲಿ ಆಸ್ಪತ್ರೆಗೆಸೇರಿಸಲು ಹರಸಾಹಸ ಪಡುವ ಸ್ಥಿತಿ ಇತ್ತು.
ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಸೇತುವೆಯಿಂದಾಗಿ ಆಗುವ ಸಮಸ್ಯೆ ಪರಿಹರಿಸಬೇಕುನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಸ ತೆರವು ಕಾರ್ಯಾಚರಣೆಯಲ್ಲಿ ಗ್ರಾಮದ ಲಕ್ಷ್ಮಪ್ಪ ಕಳ್ಳಿಮನಿ, ದಾದಾಫೀರ್ ಸಬಾನ್ನವರ, ಇಮ್ರಾನ್ ರಾಣೆಬೆನ್ನೂರ, ಸಿದ್ದು ಹಿರೇಮಠ, ಫತ್ತೇಸಾಬ ಹಾದಿಮನಿ, ನರಸಯ್ಯಾ, ಮಹಾದೇವ ಹೊನ್ನಳ್ಳಿ,ಕಲ್ಲಪ್ಪ ಹರಿಜನ್, ಇಸ್ಮಾಯಿಲ್ ದೇವರಾಯಿ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.