ಹುಬ್ಬಳ್ಳಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಇಲ್ಲಿನ ವಿಕಾಸ ನಗರದ ಪಕ್ಷದ ಕಚೇರಿಯಲ್ಲಿ ಅರವಿಂದ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಜೈಕಾರ ಕೂಗಿದರು. ಎರಡು ಬಾರಿ ದೆಹಲಿಯಲ್ಲಿ ಆಡಳಿತ ನಡೆಸಿದ ಸರ್ಕಾರದ ಸಾಧನೆ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಸಂತೋಷ ನರಗುಂದ ಮಾತನಾಡಿ, ಅಭಿವೃದ್ಧಿಪರ ಆಡಳಿತ ಹೇಗಿರಬೇಕು ಎಂದು ತೋರಿಸಿಕೊಟ್ಟ ಏಕೈಕ ನಾಯಕ ಅರವಿಂದ ಕೇಜ್ರಿವಾಲ್. ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸುವ ಮೂಲಕ ಪ್ರತಿಸ್ಪರ್ಧಿಗಳಿಗೆ ಆಘಾತ ನೀಡಿದ್ದಾರೆ. ಅಲ್ಲಿಯ ಮತದಾರರು ಸಹ ದ್ವೇಷದ ರಾಜಕಾರಣ ತಿರಸ್ಕರಿಸಿ, ಜನಪರ ರಾಜಕಾರಣಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ದೆಹಲಿಯಲ್ಲಿರುವ ಮಾದರಿ ರಾಜಕೀಯವನ್ನು ಎಲ್ಲ ರಾಜ್ಯಕ್ಕೂ ವಿಸ್ತರಿಸಬೇಕು. ಮತದಾರರು ಜಾಗೃತರಾದರೆ ಮಾತ್ರ, ಉತ್ತಮ ಆಡಳಿತ ನೋಡಲು ಸಾಧ್ಯ ಎಂದು ಹೇಳಿದರು.
ಪಕ್ಷದ ಹುಬ್ಬಳ್ಳಿ ಘಟಕದ ಅಧ್ಯಕ್ಷ ವಿವೇಕಾನಂದ ಸಾಲಿನ್ಸ್, ಎಸ್.ಎಫ್. ಪಾಟೀಲ, ಸಫಿ ಮುಲ್ಲಾ, ಅವಿನಾಶ ಸದಾನಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.