ಹುಬ್ಬಳ್ಳಿ: ಕರ್ತವ್ಯಕ್ಕೆ ಗೈರು ಹಾಜರಾಗಿ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಡಚಣೆ ಉಂಟಾಗಲು ಕಾರಣರಾದ ಸಾರಿಗೆ ಸಿಬ್ಬಂದಿಯನ್ನು ಸಂಸ್ಥೆಯ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ತರಬೇತಿ ಚಾಲಕರಾದ ಹುಬ್ಬಳ್ಳಿ ಗ್ರಾಮಾಂತರ 2ನೇ ಡಿಪೋದ ಎಂ.ಬಿ.ಬಿಸಲದಿನ್ನಿ, ನವಲಗುಂದ ಡಿಪೋದ ಎಸ್. ಎಫ್. ಆದಮ್ಮನವರ ಮತ್ತು ಇನ್ನೊಬ್ಬ ತರಬೇತಿ ಚಾಲಕ ಕಲಘಟಗಿ ಡಿಪೋದ ಜಗಜೀವರಾಮ ಎಂಬುವವರನ್ನು ವಜಾ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸ್ಗಳ ಕಾರ್ಯಾಚರಣೆಯಲ್ಲಿ ಚಾಲಕರ ಪಾತ್ರ ಮಹತ್ವದ್ದಾಗಿರುತ್ತದೆ. ವಜಾಗೊಂಡಿರುವ ತರಬೇತಿ ಚಾಲಕರು ಅನಧಿಕೃತವಾಗಿ ದೀರ್ಘಾವಧಿಗೆ ಗೈರುಹಾಜರಾಗಿ ಉಳಿಯುವ ಮೂಲಕ ದುರ್ನಡತೆ ತೋರಿದ್ದಾರೆ. ಆದ್ದರಿಂದ ಅವರು ಸಂಸ್ಥೆಯ ತರಬೇತಿ ಚಾಲಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅಸಮರ್ಥ ಹಾಗೂ ಅನರ್ಹ ಅಭ್ಯರ್ಥಿಗಳೆಂದು ಪರಿಗಣಿಸಲಾಗಿದೆ. ಅವರು ನೇಮಕಾತಿ ಪೂರ್ವದ ತರಬೇತಿಯಲ್ಲಿರುವುದರಿಂದ ತರಬೇತಿಯಲ್ಲೂ ಸಹ ಮುಂದುವರಿಯಲು ಅನರ್ಹ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ವಜಾಗೊಂಡವರನ್ನು ನೇರ ನೇಮಕಾತಿ ಮೇಲೆ ಆಯ್ಕೆಗೊಂಡ ಚಾಲಕ ಹುದ್ದೆಯ ಆಯ್ಕೆ ಪಟ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ವಜಾಗೊಂಡಿರುವ ಸಿಬ್ಬಂದಿ ಸಂಸ್ಥೆಯಲ್ಲಿ ಕಾಯಂ ನೇಮಕಾತಿ ಹಕ್ಕನ್ನೂ ಸಹ ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಇವರಿಗೆ ಯಾವುದೇ ಆರ್ಥಿಕ ಸೌಲಭ್ಯಗಳು ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.