ADVERTISEMENT

‘2024ರ ಒಲಿಂಪಿಕ್ಸ್‌ ಅರ್ಹತೆಯ ಗುರಿ’

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 14:43 IST
Last Updated 9 ಸೆಪ್ಟೆಂಬರ್ 2021, 14:43 IST

ಹುಬ್ಬಳ್ಳಿ: ರಾಜ್ಯದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಶೂಟಿಂಗ್‌ ಸಂಸ್ಥೆ ಅಸ್ತಿತ್ವಕ್ಕೆ ಬಂದ ನಂತರ ಸೆ. 12ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಮೊದಲ ಟೂರ್ನಿ ಭವಿಷ್ಯದ ಒಲಿಂಪಿಕ್ಸ್‌ ಕನಸಿಗೆ ರಹದಾರಿಯಾಗಲಿದೆ ಎಂದು ಕರ್ನಾಟಕ ಪ್ಯಾರಾ ಶೂಟಿಂಗ್‌ ಸ್ಪೋರ್ಟ್ಸ್‌ ಸಂಸ್ಥೆ ಕಾರ್ಯದರ್ಶಿ ರವಿಚಂದ್ರ ಬಾಲೆಹೊಸೂರ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಜಿಲ್ಲೆಯ ಪ್ಯಾರಾ ಶೂಟರ್‌ಗಳು ಅರ್ಹತೆ ಗಳಿಸಬೇಕು ಎನ್ನುವ ಉದ್ದೇಶ ನಮ್ಮದು. ಅದಕ್ಕಾಗಿ ಮೇಲಿಂದ ಮೇಲೆ ರಾಜ್ಯಮಟ್ಟದ ಟೂರ್ನಿಗಳನ್ನು ಆಯೋಜಿಸಲಾಗುವುದು. ಪ್ರಾಯೋಜಕರು ಹಾಗೂ ದಾನಿಗಳ ಕೊರತೆಯಿಂದಾಗಿ ಸ್ಥಳೀಯ ಶೂಟರ್‌ಗಳಿಗೆ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

‘12ರ ಸಂಜೆ 3.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕರ್ನಾಟಕ ಅಂಗವಿಕಲರ ಕ್ರೀಡಾ ಸಂಸ್ಥೆ ಗೌರವ ಅಧ್ಯಕ್ಷ ಪಿ.ಎನ್‌. ಪಾಪಣ್ಣ, ಅಧ್ಯಕ್ಷ ಎಂ. ಮಹಾದೇವ, ಒಲಿಂಪಿಯನ್‌ ಶೂಟರ್‌ ಪಿ.ಎನ್‌. ಪ್ರಕಾಶ್‌, ಶಾಸಕ ಜಗದೀಶ ಶೆಟ್ಟರ್‌, ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಉದ್ಯಮಿ ಆನಂದ ಸಂಕೇಶ್ವರ, ಸ್ವರ್ಣ ಗ್ರೂಪ್‌ ಕಂಪನಿಯ ನಿರ್ದೇಶಕ ಎಸ್‌ವಿಎಸ್‌ ಪ್ರಸಾದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

ರಾಷ್ಟ್ರೀಯ ಶೂಟರ್‌ಗಳಾದ ರಾಷ್ಟ್ರೀಯ ಪ್ಯಾರಾ ಶೂಟರ್‌ಗಳಾದ ಜ್ಯೋತಿ ಸಣ್ಣಕ್ಕಿ, ಶಂಕರಲಿಂಗ ತವಳಿ, ರಾಕೇಶ ನಿಡಗುಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.