
ಧಾರವಾಡ: ‘ನಗರದ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ವತಿಯಿಂದ ಜ.31ರಂದು ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಸರಜೂ ಕಾಟ್ಕರ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಾಧನಕೇರಿಯ ಬೇಂದ್ರೆ ಭವನದಲ್ಲಿ ಸಂಜೆ 5 ಗಂಟೆಗೆ ಸಮಾರಂಭ ಆರಂಭವಾಗಲಿದೆ. ಪ್ರೊ.ಮಾಲತಿ ಪಟ್ಟಣಶೆಟ್ಟಿ, ಸತೀಶ ಕುಲಕರ್ಣಿ ಅವರಿಗೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು’ ಎಂದು ತಿಳಿಸಿದರು
‘ಟ್ರಸ್ಟ್ ಸದಸ್ಯರಾದ ಶರಣ್ಣಮ್ಮ ಗೊರೇಬಾಳ ಮತ್ತು ವೈ.ಎಂ.ಯಾಕೊಳ್ಳಿ ಅವರು ಅಭಿನಂದನಾ ನುಡಿಗಳನ್ನಾಡುವರು. ಭಾರ್ಗವಿ ಕುಲಕರ್ಣಿ, ಗಾಯತ್ರಿ ಟೊಣಪಿ ಮತ್ತು ತಂಡದವರು ಬೇಂದ್ರೆ ಗೀತ ಗಾಯನ ಪ್ರಸ್ತುತ ಪಡಿಸುವರು’ ಎಂದರು.
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ವೈ.ಎಂ.ಯಾಕೊಳ್ಳಿ, ಅಶೋಕ ಶೆಟ್ಟರ, ಶರಣಮ್ಮ ಗೊರೇಬಾಳ, ಪ್ರಭು ಕುಂದರಗಿ, ಇಮಾಮಸಾಬ್ ವಲ್ಲೆಪ್ಪನವರ, ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ಇದ್ದರು.
‘ಜ.31 ಕವಿ ದಿನ ಆಚರಣೆಗೆ ಸರ್ಕಾರಕ್ಕೆ ಮನವಿ’
‘ಬೇಂದ್ರೆ ಅವರ ಜನ್ಮ ದಿನವನ್ನು (ಜ.31) ಕವಿ ದಿನವಾಗಿ ಆಚರಿಸಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಸರಜೂ ಕಾಟ್ಕರ್ ತಿಳಿಸಿದರು. ‘ಬೇಂದ್ರೆ ಕುರಿತು ವಿವಿಧ ಲೇಖಕರು ಬರೆದಿರುವ ಕೃತಿಗಳ ಸಂಗ್ರಹ ಪ್ರದರ್ಶನ ಬೇಂದ್ರೆ ಅವರು ಮರಾಠಿಯಲ್ಲಿ ರಚಿಸಿರುವ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಬೇಂದ್ರೆ ಅವರ ನಾಕುತಂತಿ ಕೃತಿಗೆ ಜ್ಞಾನಪೀಠ ಸಂದು 50 ವರ್ಷವಾದ ನಿಮಿತ್ತ ನಾಲ್ಕು ಕಡೆ ವಿಚಾರಸಂಕಿರಣ ಆಯೋಜನೆ ಜ್ಞಾನಪೀಠ ಸಂದ ಸ್ಮರಣಾರ್ಥ ‘ಯವ ಕವಿ’ ಪ್ರಶಸ್ತಿ ಸ್ಥಾಪನೆಗೆ ಉದ್ದೇಶಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.