ADVERTISEMENT

ಕುಂದಗೋಳದಲ್ಲಿ ಜನವರಿ 28ಕ್ಕೆ ಅಮಿತ್ ಶಾ ರೋಡ್ ಶೋ‌: ಮಹೇಶ ಟೆಂಗಿನಕಾಯಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 9:07 IST
Last Updated 25 ಜನವರಿ 2023, 9:07 IST
ಮಹೇಶ ಟೆಂಗಿನಕಾಯಿ
ಮಹೇಶ ಟೆಂಗಿನಕಾಯಿ   

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಜ. 28ರಂದು ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ರೋಡ್ ಶೋ ನಡೆಸಲಿದ್ದಾರೆ ಎಂದು‌ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 27ಕ್ಕೆ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಹೂಡಲಿರುವ ಶಾ ಅವರು ಬೆಳಿಗ್ಗೆ ಕೆಎಲ್ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ, ಧಾರವಾಡದಲ್ಲಿ ವಿಧಿವಿಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವರು ಎಂದರು.

ಮಧ್ಯಾಹ್ನ 1.30ಕ್ಕೆ ಕುಂದಗೋಳಕ್ಕೆ ಭೇಟಿ ನೀಡಲಿರುವ ಅವರು, ಪಟ್ಟಣದ ಶಂಭು ಲಿಂಗೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವರು. ಬಳಿಕ ಒಂದು‌ ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಚುನಾವಣಾ ಪ್ರಚಾರದ ಗೋಡೆ ಬರಹ ಮತ್ತು ಮನೆಮನೆಗೆ ಕರಪತ್ರಗಳನ್ನು ಹಂಚುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ADVERTISEMENT

ನಂತರ, ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿಯಲ್ಲಿ ಗ್ರಾಮಾಂತರ ಚನ್ನಮ್ಮನ ಕಿತ್ತೂರು, ಖಾನಾಪುರ, ಬೈಲಹೊಂಗಲದ ಪ್ರಮುಖರ ಸಭೆ ನಡೆಸುವ ಅವರು, ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್ ಕಟೀಲ್, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಇಡೀ‌ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು‌ ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಡೆದ ಹತ್ತು ದಿನಗಳ ಬೂತ್ ವಿಜಯ ಅಭಿಯಾನದಲ್ಲಿ ರಾಜ್ಯದ 58,286 ಬೂತ್ ಗಳ ಪೈಕಿ, 52 ಸಾವಿರ ಬೂತ್ ಗಳಲ್ಲಿ ಬೂತ್ ಪ್ರಮುಖರನ್ನು ಮತ್ತು 13.21 ಲಕ್ಷ ಜನ ಪೇಜ್ ಪ್ರಮುಖರನ್ನು ನಿಯೋಜಿಸಲಾಗಿದೆ. ಬೂತ್ ಮಟ್ಟದಲ್ಲಿ 51,260 ವಾಟ್ಸ್ ಗ್ರೂಪ್ ರಚಿಸಲಾಗಿದ್ದು, 13.93 ಲಕ್ಷ ಕಾರ್ಯಕರ್ತರು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ ಎಂದರು.

ವಿಜಯ ಸಂಕಲ್ಪ ಅಭಿಯಾನವನ್ನು ಜ. 21ರಿಂದ 29ರವೆಗೆ ಹಮ್ಮಿಕೊಂಡಿದ್ದು, ಮಿಸ್ಡ್ ಕಾಲ್ ನೊಂದಿಗೆ ರಾಜ್ಯದಲ್ಲಿ ಒಂದು‌ ಕೋಟಿ ಪಕ್ಷದ ಸದಸ್ಯತ್ವವನ್ನು ಮಾಡುವ ಗುರಿ ಹೊಂದಲಾಗಿದೆ. ಇದರ‌ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ಮನೆಮನೆಗೆ ತಲುಪಿಸುವ, ಸ್ಟಿಕ್ಕರ್ ಅಂಟಿಸುವ ಕೆಲಸ ನಡೆಯಲಿದೆ. ರಾಜ್ಯದಲ್ಲಿ ಐದು ಲಕ್ಷ ಗೋಡೆ ಬರಹ ಮಾಡಲಾಗುವುದು. ಬೂತ್ ಮಟ್ಟದಲ್ಲಿ ಮನದ ಮಾತು ಕಾರ್ಯಕ್ರಮ ಕೇಳಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮುಖಂಡರಾದ ಎಸ್.ಐ. ಚಿಕ್ಕನಗೌಡ್ರ, ಎಂ.ಆರ್.‌ ಪಾಟೀಲ, ಈರಣ್ಣ ಜಡಿ, ರವಿ ಪಾಟೀಲ, ಬಸವರಾಜ ಕುಂದಗೋಳಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.