ಹುಬ್ಬಳ್ಳಿ: ಪಾಲಿಕೆ ಚುನಾವಣೆಯ ಟಿಕೆಟ್ಗಾಗಿ ಕುರುಬ ಸಮಾಜದ 20ಕ್ಕೂ ಜನ ಆಕಾಂಕ್ಷಿಗಳು ವಿವಿಧ ಪಕ್ಷಗಳಿಗೆ ಅರ್ಜಿ ಸಲ್ಲಿಸಿದ್ದು, ಕನಿಷ್ಠ ಐದಾರು ಜನರಿಗಾದರೂ ಟಿಕೆಟ್ ನೀಡಬೇಕು ಎಂದು ಧಾರವಾಡ ತಾಲ್ಲೂಕಿನ ಮನಸೂರಿನ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿಜೆಪಿಯಲ್ಲಿರುವ ಶಿವಾನಂದ ಮುತ್ತಣ್ಣನವರ ಸೇರಿದಂತೆ ಕುರುಬ ಸಮಾಜದ ಹಲವಾರು ಜನ ವಿವಿಧ ಪಕ್ಷಗಳಲ್ಲಿ ದುಡಿದಿದ್ದಾರೆ. ಈ ಸಮಾಜ ರಾಜಕೀಯವಾಗಿ ಮುಂದೆ ಬರಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಮುಖ ವೇದಿಕೆಯಾಗಿವೆ. ಆದ್ದರಿಂದ ಸಮಾಜದ ಆಕಾಂಕ್ಷಿಗಳನ್ನು ಪರಿಗಣಿಸಬೇಕು. ಶಿವಾನಂದ ಅವರಿಗೆ ಈ ಬಾರಿ 68ನೇ ವಾರ್ಡ್ನಿಂದ ಟಿಕೆಟ್ ನೀಡಬೇಕು’ ಎಂದರು.
‘ಸಮಾಜದ ಅಭಿವೃದ್ಧಿಗೆ ಅನೇಕ ಸಂಘಗಳಿದ್ದರೂ, ಸಂಘಟನಾತ್ಮಕವಾಗಿ ಒಂದಾಗಿ ಸಮಾಜವನ್ನು ಕಟ್ಟುವ ಕೆಲಸ ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ಇದರಿಂದ ನಮಗೆ ರಾಜಕೀಯ ಪ್ರಾತಿನಿಧ್ಯವೂ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸಮಾಜವನ್ನು ಕಟ್ಟುವ ಕೆಲಸವನ್ನು ತುರ್ತಾಗಿ ಮಾಡುತ್ತೇವೆ. ರಾಜಕೀಯವಾಗಿ ನಮಗೆ ಸಾಮಾಜಿಕ ನ್ಯಾಯ ಕೊಡಬೇಕು’ ಎಂದು ಮನವಿ ಮಾಡಿದರು.
ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಎಚ್.ಎಫ್. ಮುದುಕಣ್ಣನವರ, ಶಿವಾನಂದ ಜೋಗಿನ ಹಾಗೂ ಸಿದ್ದಪ್ಪ ಜಟ್ಟಪ್ಪನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.