ಹುಬ್ಬಳ್ಳಿ: ಮಳೆಯಿಂದಾಗಿ ಹುಬ್ಬಳ್ಳಿ ವಿಭಾಗದ ದೂಧಸಾಗರ –ಸೋನಾಲಿಯಂ ರೈಲು ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿದಾಗ, ಬ್ರೇಕ್ ಹಾಕಿ ಮಂಗಳೂರು ಜಂಕ್ಷನ್–ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈ ರೈಲನ್ನು ನಿಲ್ಲಿಸಿದಇಬ್ಬರು ಲೋಕೊ ಪೈಲಟ್ ಹಾಗೂ ಗಾರ್ಡ್ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.ಸಮಯಪ್ರಜ್ಞೆ ತೋರಿ ಅನಾಹುತ ತಪ್ಪಿಸಿದ ಸಿಬ್ಬಂದಿಗೆನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರು, ನಗದು ಬಹುಮಾನ ಘೋಷಿಸಿದ್ದಾರೆ.
ಜುಲೈ 23ರಂದು ಬೆಳಿಗ್ಗೆ 6ರ ಸುಮಾರಿಗೆ ಕುಲೇಂ ಕಡೆಯಿಂದ ಕ್ಯಾಸಲ್ ರಾಕ್ ಕಡೆಗೆ ರೈಲು ಹೋಗುತ್ತಿತ್ತು. ದೂಧಸಾಗರ –ಸೋನಾಲಿಯಂ ಮಾರ್ಗದಲ್ಲಿ ಗುಡ್ಡದ ಮಣ್ಣು ಕುಸಿದು ಹಳಿ ಮೇಲೆ ಬೀಳುತ್ತಿರುವುದನ್ನು ಗಮನಿಸಿದ ಲೋಕೊ ಪೈಲಟ್ರಂಜಿತ್ ಕುಮಾರ್, ತಕ್ಷಣ ಬ್ರೇಕ್ ಹಾಕಿದರು.
ಹಳಿ ಮೇಲೆ ಮಣ್ಣಿನ ರಾಶಿ ಹಾಗೂ ಬಂಡೆಗಳು ಬಿದ್ದಿದ್ದರಿಂದ ಬ್ರೇಕ್ ಹಾಕಿದರೂ, ಗಾಲಿಗಳ ಸಮೇತ ಎಂಜಿನ್ ಹಳಿ ತಪ್ಪಿತು. ಸಮೀಪದ ದೂಧಸಾಗರದ ಸ್ಟೇಷನ್ ಮಾಸ್ಟರ್ಗೆ ವಿಷಯ ತಿಳಿಸಿ, ಹುಬ್ಬಳ್ಳಿಯ ನಿಯಂತ್ರಣ ಕಚೇರಿಗೆ ಮಾಹಿತಿ ನೀಡುವಂತೆ ಹೇಳಿದರು. ಇತ್ತ ಬ್ರೇಕ್ ಹಾಕಿದ್ದನ್ನು ಗಮನಿಸಿದ ಗಾರ್ಡ್ ಶೈಲೇಂದ್ರ ಕುಮಾರ್, ರೈಲಿನ ಕೊನೆಯಲ್ಲಿರುವ ಬ್ರೇಕ್ ವ್ಯಾನ್ಗೆ ಹ್ಯಾಂಡ್ ಬ್ರೇಕ್ ಹಾಕಿ ಎಂಜಿನ್ ಹತ್ತಿರ ಹೋದರು.
ಇಬ್ಬರೂ ಹಳಿಯ ಎರಡೂ ದಿಕ್ಕಿನಲ್ಲಿ ನಿಗದಿತ ಅಂತರದಲ್ಲಿ ಡೆಟೊನೆಟರ್ಗಳನ್ನು ಇಡುವಂತೆ, ರೈಲಿನ ಮುಂದಿನ ಮತ್ತು ಹಿಂಭಾಗದ ಎಂಜಿನ್ಗಳ ಸಹಾಯಕ ಲೊಕೊ ಪೈಲಟ್ ಹಷೀದ್ ಕೆ. ಅವರಿಗೆ ಸೂಚಿಸಿದರು. ರೈಲನ್ನು ಸರಪಳಿ ಮೂಲಕ ಹಳಿಗಳೊಂದಿಗೆ ಭದ್ರಪಡಿಸಿ, ವೀಲ್ ಸ್ಕಿಡ್ಗಳನ್ನು ಇರಿಸಿದರು. ಸುರಕ್ಷತೆಯ ದೃಷ್ಟಿಯಿಂದ ರೈಲಿನ ಮೊದಲ 3 ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಿ, ಮೂರೂ ಬೋಗಿಗಳನ್ನು ಉಳಿದ ಬೋಗಿಗಳಿಂದ ಪ್ರತ್ಯೇಕಿಸಿದರು.
ಹಿಂಭಾಗದಲ್ಲಿ ಅಳವಡಿಸಿದ್ದ (ಬ್ಯಾಂಕಿಂಗ್) ಎಂಜಿನ್ಗಳ ಸಹಾಯದಿಂದ 345 ಪ್ರಯಾಣಿಕರಿದ್ದ ರೈಲನ್ನು ಗಾರ್ಡ್ ಶೈಲೇಂದರ್ ಕುಮಾರ್ ಅವರು, ಲೋಕೊ ಪೈಲಟ್ ಎಸ್.ಡಿ. ಮೀನಾ ಮತ್ತು ಸಹಾಯಕ ಲೋಕೊ ಪೈಲಟ್ ಎಸ್.ಕೆ. ಸೈನಿ ಅವರೊಂದಿಗೆ ಸುರಕ್ಷಿತವಾಗಿ ಕುಲೇಂ ನಿಲ್ದಾಣಕ್ಕೆ ಮರಳಿ ಕಳುಹಿಸಿದರು.ರಂಜಿತ್ ಮತ್ತು ಹಶೀದ್ ಅವರು ಹಳಿ ತಪ್ಪಿದ ಎಂಜಿನ್ ಕಾರ್ಯಾಚರಣೆಗೆ ನೆರವಾಗಲು ಸ್ಥಳದಲ್ಲೇ ಉಳಿದುಕೊಂಡರು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.