ಬೈಲಹೊಂಗಲ: ಎಸಿಬಿ ಅಧಿಕಾರಿ ಎಂದು ಹೇಳಿ ಸರ್ಕಾರಿ ನೌಕರನಿಂದ ಹಣ ವಸೂಲಿ ಮಾಡುತ್ತಿದ್ದ ವಂಚಕರನ್ನು ಬೈಲಹೊಂಗಲ ಪೊಲೀಸರು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವನ್ನೂರ ಗ್ರಾಮದ ವಿಶಾಲ ಭಾಂವೇಪ್ಪ ಪಾಟೀಲ(42) ಮತ್ತು ಬೆಂಗಳೂರಿನ ಕೊಡಗೇನಹಳ್ಳಿ ನಿವಾಸಿ ಶ್ರೀನಿವಾಸ ಆಶ್ವತನಾರಾಯಣ (38) ಬಂಧಿತರು.
ಘಟನೆ ವಿವರ: ಇಲ್ಲಿಯ ಸಹಾಯಕ ಕೃಷಿ ಅಧಿಕಾರಿ ಬಿ.ಆರ್. ಹುಲಗಣ್ಣವರ ಎಂಬುವರಿಗೆ ಕರೆ ಮಾಡಿ ನಾವು ಎಸಿಬಿ ಅಧಿಕಾರಿಗಳಿದ್ದು, ನೀವು ಬೇನಾಮಿ ಆಸ್ತಿ ಸಂಪಾದಿಸಿದ್ದೀರಿ ಎನ್ನುವ ದೂರು ಬಂದಿದೆ. ನೀವು ಈಗ ನಿವೃತ್ತಿ ಅಂಚಿನಲ್ಲಿದ್ದೀರಿ. ನಿಮ್ಮ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿದರೆ ಪಿಂಚಣಿ ಸಿಗುವುದಿಲ್ಲ. ಆದ್ದರಿಂದ ₹5 ಲಕ್ಷ ನೀಡಿ ’ಹೊಂದಾಣಿಕೆ‘ ಮಾಡಿಕೊಳ್ಳಿ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದು ಸರ್ಕಾರಿ ಅಧಿಕಾರಿ ಸೆ. 15ರಂದು ದೂರು ದಾಖಲಿಸಿದ್ದರು. ಬಂಧಿತರಿಂದ ಒಂದು ಕಾರ್, ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ.
ಜೂಜಾಟ: 22 ಮಂದಿ ಬಂಧನ
ಬೆಳಗಾವಿ: ಇಲ್ಲಿನ ಸದಾನಂದ ಮಠದ ಪಕ್ಕದ ಗಲ್ಲಿಯಲ್ಲಿ ಭಾನುವಾರ ಮಧ್ಯರಾತ್ರಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 22 ಮಂದಿಯನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅವರಿಂದ ₹ 1.85 ಲಕ್ಷ, 14 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ವಿಕ್ರಮ ಅಮಟೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.
‘ನಗರದಲ್ಲಿ ಜೂಜಾಟ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯವ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸಬೇಕು’ ಎಂದು ಪೊಲೀಸ್ ಅಧಿಕಾರಿಗಳು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.