ADVERTISEMENT

ಹುಬ್ಬಳ್ಳಿ: ನೀನಾದ ಕಲಾ ಪ್ರದರ್ಶನ ಡಿ.26ರಿಂದ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 14:05 IST
Last Updated 22 ಡಿಸೆಂಬರ್ 2021, 14:05 IST

ಹುಬ್ಬಳ್ಳಿ: ಕಲಾವಿದರಾದ ಎಂ.ಎಸ್.ಲಂಗೋಟಿ ಮತ್ತು ಮಂಜುಳಾ ಕೆ.ವಿ. ಅವರ ನಿಸರ್ಗದಲ್ಲಿ ‘ನೀನಾ’ದ ಕಲಾ ಪ್ರದರ್ಶನ ಲ್ಯಾಮಿಂಗ್ಟನ್ ರಸ್ತೆಯ ಹೋಟೆಲ್ ಕೃಷ್ಣ ಭವನದಲ್ಲಿ ಡಿ. 26ರಿಂದ ಡಿ. 28ರವರೆಗೆ ನಡೆಯಲಿದೆ.

‘ಡಿ. 26ರಂದು ಬೆಳಿಗ್ಗೆ 11.30ಕ್ಕೆ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಎಂ.ಆರ್. ಬಾಳೇಕಾಯಿ ಪ್ರದರ್ಶನ ಉದ್ಘಾಟಿಸಲಿದ್ದಾರೆ. ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ವೈ. ನಾಗನಗೌಡರ ಅಧ್ಯಕ್ಷತೆ ವಹಿಸಲಿದ್ದು, ಕಲಾವಿದರಾದ ಮೆಹಬೂಬ್‌ಅಲಿ ಬಂಗ್ಲೇವಾಲೆ, ಕರಿಯಪ್ಪ ಹಂಚಿನಮನಿ, ಗುರುನಾಥ ಶಾಸ್ತ್ರಿ ಮತ್ತು ಜಯಾನಂದ ಮಾದರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಕಲಾವಿದ ಎಂ.ಎಸ್‌. ಲಂಗೋಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಡಿ. 27ರಂದು ಬೆಳಿಗ್ಗೆ 11.30ಕ್ಕೆ ಕಲಾವಿದ ಜಿ.ಆರ್‌. ಮಲ್ಲಾಪುರ ಅವರಿಂದ ಹಾಗೂ ಡಿ. 28ರಂದು ಮಧ್ಯಾಹ್ನ 3ಕ್ಕೆ ಕಲಾವಿದ ಕೆ.ವಿ. ಶಂಕರ ಅವರಿಂದ ಚಿತ್ರಕಲೆ ಪ್ರಾತ್ಯಕ್ಷಿಕೆ ನಡೆಯಲಿದೆ. ಬಳ್ಳಿ, ಹೂವು, ಮರ, ಗಿಡ, ಹಣ್ಣು ಹೀಗೆ 50 ನಿಸರ್ಗ ಕಲಾಕೃತಿ ಪ್ರದರ್ಶನಗೊಳ್ಳಲಿದೆ. ನಿಸರ್ಗದಲ್ಲಿ ನೀನು, ನಾನು ಎನ್ನುವ ಕಲ್ಪನೆಯಲ್ಲಿ ಚಿತ್ರ ರಚಿಸಿದ್ದು, ಪ್ರದರ್ಶನಕ್ಕೂ ‘ನೀನಾ’ ಎಂದು ಹೆಸರು ಇಟ್ಟಿದ್ದೇವೆ. ಉಚಿತ ಪ್ರವೇಶವಿದ್ದು, ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಪ್ರದರ್ಶನ ನಡೆಯಲಿದೆ’ ಎಂದರು.

ADVERTISEMENT

ಡಾ. ಎಂ.ವಿ. ಮಿಣಜಗಿ ಆರ್ಟ್‌ ಗ್ರೂಪ್‌ ಅಧ್ಯಕ್ಷ ಆರ್‌.ಬಿ. ಗರಗ, ‘ಹುಬ್ಬಳ್ಳಿ ವಾಣಿಜ್ಯ ನಗರಿಯಾಗಿ ಗುರುತಿಸಿಕೊಂಡು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ, ಇಲ್ಲಿಯ ಕಲಾವಿದರಿಗೆ ಮಾತ್ರ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಕಲಾವಿದರ ಕಲೆಯ ಪ್ರದರ್ಶನಕ್ಕೆ ಸೂಕ್ತ ಗ್ಯಾಲರಿಯೇ ಇಲ್ಲಿಲ್ಲ. ಶಾಶ್ವತ ಆರ್ಟ್‌ ಗ್ಯಾಲರಿ ನಿರ್ಮಿಸಿಕೊಡಬೇಕು ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಅವರಿಂದ ನಮಗೆ ಭರವಸೆ ಮಾತ್ರ ಸಿಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಲಾವಿದರಾದ ಕೆ.ವಿ. ಶಂಕರ, ಜಿ.ಆರ್. ಮಲ್ಲಾಪುರ, ಮಂಜುಳಾ ಕೆ.ವಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.