ಹುಬ್ಬಳ್ಳಿ: ಏರುಗತಿಯಲ್ಲಿ ಸಾಗಿರುವ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಕಡಿಮೆ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ದಿ. ಲಕ್ಷ್ಮಣ ಹಿರೇಕೆರೂರ ಆಟೊ ಚಾಲಕರ ಸಂಘದ ಸದಸ್ಯರು ಗುರುವಾರ ಪಾದಯಾತ್ರೆ ಮಾಡಿದರು.
ಗೋಕುಲ ರಸ್ತೆಯಲ್ಲಿರುವ ಲಕ್ಷ್ಮಣ ಹಿರೇಕೆರೂರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿ ಮಿನಿವಿಧಾನ ಸೌಧದ ತನಕ ಬಂದು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಕೋವಿಡ್ ಮತ್ತು ಲಾಕ್ಡೌನ್ನಿಂದಾಗಿ ಆಟೊ ಚಾಲಕರ ಬದುಕು ದುಸ್ತರವಾಗಿದೆ, ಸರ್ಕಾರ ಘೋಷಿಸಿದ ಪರಿಹಾರ ಕೂಡ ಎಲ್ಲರಿಗೂ ತಲುಪಿಲ್ಲ. ಇಂಥ ಕಷ್ಟದ ಸಮಯದಲ್ಲಿ ಇಂಧನ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ 2017ರಲ್ಲಿ ಆಟೊ ಚಾಲಕರನ್ನು ಅಸಂಘಟಿತ ಕಾರ್ಮಿಕರೆಂದು ಹೇಳಿದ್ದಾರೆ. ಆದರೆ, ಅವರಿಗೆ ತಲುಪಬೇಕಾದ ಸೌಲಭ್ಯಗಳು ಮಾತ್ರ ಸಿಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಚಾಲನಾ ಪರವಾನಗಿ ನೀಡಲು ವಿಳಂಬ ಮಾಡಲಾಗುತ್ತಿದ್ದು, ಇದನ್ನು ತಪ್ಪಿಸಬೇಕು. ಪರವಾನಗಿ ಹೊಂದಿದ ಚಾಲಕರಿಗೆ ಬ್ಯಾಂಕ್ನಲ್ಲಿ ಸಬ್ಸಿಡಿ ದರದಲ್ಲಿ ಸಾಲ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಹನುಮಂತಪ್ಪ ಎಂ. ಪವಾಡಿ, ಉಪಾಧ್ಯಕ್ಷ ಮಂಜುನಾಥ ಎಂ. ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಂ. ಉಳ್ಳಾಗಡ್ಡಿ, ಸಂಘಟನಾ ಕಾರ್ಯದರ್ಶಿ ರಾಜು ಕಾಲವಾಡ, ಸಹ ಕಾರ್ಯದರ್ಶಿ ವಿಜಯ ವಿಭೂತಿ, ಖಜಾಂಚಿ ಸದಾನಂದ ಎಂ. ಪವಾಡಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಪ್ರಕಾಶ ಮುಚ್ಚಂಡಿ, ಕಿರಣ ಹದ್ಲಿ, ಶ್ರೀಕಾಂತ ಬೋಸ್ಲೆ, ಅಶೋಕ ಬಾಸೂರ, ಇರ್ಫಾನ್ ಮುನವಳ್ಳಿ, ಶಂಭುಲಿಂಗ ಬಂಡಿವಡ್ಡರ, ನಿರುಪಾದಿ ಕಣಗಲ್, ಮಂಜುನಾಥ ಬಾದಾಮಿ, ಅಲಿ ಹುಡೇದ, ಗುರುನಾಥ ಸೋಳಂಕೆ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.