ಹುಬ್ಬಳ್ಳಿ: ‘ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಪ್ರತಿಪಾದಿಸಿದ ವಿಚಾರಧಾರೆಗಳು ಸಾರ್ವಕಾಲಿಕವಾಗಿವೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿ ಡಾ.ಎಚ್. ರಾಮನಗೌಡರ ಹೇಳಿದ್ದಾರೆ.
ವಿದ್ಯಾನಗರದ ಸಿದ್ದೇಶ್ವರ ಪಾರ್ಕ್ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ಧ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಸವೇಶ್ವರರು ಸರ್ವ ರಂಗದಲ್ಲಿ ಸಮಾನತೆಯನ್ನು ತಂದು ಮನುಷ್ಯತ್ವ ಎತ್ತಿಹಿಡಿದ ಮಾನವತವಾದಿ. ಧಾರ್ಮಿಕ ಸ್ವಾತಂತ್ರ್ಯ ನೀಡಿ, ಮಹಿಳೆಯರ ಮೇಲಿನ ಶೋಷಣೆ ನಿಲ್ಲಿಸಿದ ಬಂಡಾಯಗಾರ. ದೇಹವೇ ದೇಗುಲವೆಂದು ಸಾರಿ ಮನುಷ್ಯರಲ್ಲಿ ದೈವತ್ವ ಕಂಡ ಆದರ್ಶ ಪುರುಷ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವಿ.ವಿ. ಕುರ್ತುಕೋಟಿ ಮಾತನಾಡಿ, ‘ಬಸವಣ್ಣನವರು ಜಾತಿ ರಹಿತ ಮತ್ತು ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು’ ಎಂದು ಹೇಳಿದರು.
ಡಾ.ಎಚ್. ರಾಮನಗೌಡರ,ಮಹೇಶ ಬುರ್ಲಿ ಹಾಗೂ ಚೇತನ ಬಾರದ್ವಾಡ ರವರನ್ನು ಸನ್ಮಾನಿಸಲಾಯಿತು.ಶಾರದಾ ಸಂಗೀತ ಶಾಲೆಯ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ವಚನ ಸುಧೆ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಡಿ.ಬಿ. ಬಾರಿಕಾಯಿ ಸ್ವಾಗತಿಸಿದರು.ಎಸ್.ಆರ್. ಎಮ್ಮಿ ನಿರೂಪಿಸಿದರು.ಎಂ.ಎಸ್.ಪಾಟೀಲ ವಂದಿಸಿದರು.ಸುರೇಶ ಲಿಂಬಿಕಾಯಿ, ಮೈಲಾರಪ್ಪ ಹಡಪದ, ಎಂ.ಎಸ್.ಪಾಟೀಲ ಇದ್ದರು.ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.