ADVERTISEMENT

ಬೈಕ್ ಅಪಘಾತ: ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 14:25 IST
Last Updated 12 ನವೆಂಬರ್ 2022, 14:25 IST
ತನುಶ್ರೀ ಮಹಾವೀರ ಜೈನರ
ತನುಶ್ರೀ ಮಹಾವೀರ ಜೈನರ   

ಅಣ್ಣಿಗೇರಿ: ತಾಲೂಕಿನ ಬಸಾಪೂರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಬೈಕ್‌ವೊಂದು ಸ್ಕಿಡ್ ಆಗಿ ಬಿದ್ದಿದ್ದರಿಂದ ಶಾಲಾ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬಸಾಪೂರ ಗ್ರಾಮದ ತನುಶ್ರೀ ಮಹಾವೀರ ಜೈನರ (8) ಮೃತ ಬಾಲಕಿ. ತನುಶ್ರೀ ಜೈನರ ಹಾಗೂ ಅನುಶ್ರೀ ಜೈನರ ಸಹೋದರಿಯರು ಎಂದಿನಂತೆ ಬಸಾಪೂರದಿಂದ ಅಣ್ಣಿಗೇರಿ ಪಟ್ಟಣಕ್ಕೆ ಶಾಲೆಗೆ ಬರುತ್ತಿದ್ದರು. ಗ್ರಾಮದಿಂದ ಮುಖ್ಯ ರಸ್ತೆಯ ವರೆಗೆ ಸಂಬಂಧಿಕರೊಬ್ಬರ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪಘಾತದಲ್ಲಿ ಬೈಕ್‌ ಸವಾರ್‌ ಮಂಜುನಾಥ ಜೈನರ ಹಾಗೂ ಮೃತಳ ಸಹೋದರಿ ಅನುಶ್ರೀ(15) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ADVERTISEMENT

ಘಟನಾ ಸ್ಥಳಕ್ಕೆ ಸಿಪಿಐ ಧ್ರುವರಾಜ ಪಾಟೀಲ, ಪಿಎಸ್ಐ ಸಿದ್ಧಾರೂಢ ಆಲದಕಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರೊಚ್ಚಿಗೆದ್ದ ಗ್ರಾಮಸ್ಥರು:

ಅಣ್ಣಿಗೇರಿ ಹಾಗೂ ನವಲಗುಂದ ಮಧ್ಯಭಾಗದ ಬಸಾಪೂರ ಗ್ರಾಮಕ್ಕೆ ಸರಿಯಾಗಿ ಬಸ್ ಸೌಲಭ್ಯಗಳಿಲ್ಲ. ಇದರಿಂದಲೇ ಇಂಥ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ಬಸಾಪೂರ ಗ್ರಾಮವು ಅಣ್ಣಿಗೇರಿ-ನವಲಗುಂದ ಮುಖ್ಯ ರಸ್ತೆಯಿಂದ 1 ಕಿ.ಮೀ ದೂರದಲ್ಲಿದೆ. ಗ್ರಾಮದ ಒಳಗಡೆ ಸರಿಯಾಗಿ ಬಸ್ ಸೌಲಭ್ಯ ಇಲ್ಲದೇ ಇದ್ದರಿಂದ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಗ್ರಾಮದಿಂದ ಮುಖ್ಯ ರಸ್ತೆಯ ವರೆಗೆ ನಡೆದುಕೊಂಡು ಬರಬೇಕು. ಇಲ್ಲವೇ ಖಾಸಗಿ ವಾಹನಗಳ ಮೊರೆ ಹೋಗುವುದು ಅನಿವಾರ್ಯ. ಗ್ರಾಮದ ಒಳಗಡೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಸಾಕಷ್ಟು ಭಾರಿ ರಸ್ತೆ ತಡೆ ಮಾಡಿ ಮನವಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.