ಹುಬ್ಬಳ್ಳಿ: ‘ರಕ್ತದಾನ ಮಾಡಲು ಇರುವ ವಯೋಮಿತಿಯನ್ನು 70ವರ್ಷದವರೆಗೆ ವಿಸ್ತರಿಸಿದರೆ, ನಾನು 70ವರ್ಷದವರೆಗೂ ರಕ್ತದಾನ ಮಾಡುವೆ. ರಕ್ತದಾನದಿಂದ ಬೇರೆ ಜೀವ ಉಳಿಸಬಹುದು’ ಎಂದು ಧಾರವಾಡದ ಚನ್ನಯ್ಯನಗಿರಿ ಮನಗುಂಡಿಯ ಬಸವಾನಂದ ಸ್ವಾಮೀಜಿ ಹೇಳಿದರು.
ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತಕೇಂದ್ರದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಜಾಗೃತಿಗಾಗಿ ನಡಿಗೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 108ನೇ ಬಾರಿ ರಕ್ತದಾನ ಮಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಗಣ್ಯರು ತಮ್ಮ ಜನ್ಮದಿನ, ಮದುವೆ ವಾರ್ಷಿಕೋತ್ಸವ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ಜನರು ರಕ್ತದಾನ ಮಾಡುವ ಮೂಲಕ ಜನ್ಮದಿನ ಆಚರಿಸಿಕೊಳ್ಳಬೇಕು. ರಕ್ತದಾನ ಮಾಡುವುದರಿಂದ ಹಲವು ಪ್ರಯೋಜನಗಳಿವೆ, ಜನರು ಇದನ್ನು ಅರಿತು, ರಕ್ತದಾನಕ್ಕೆ ಮುಂದಾಗಬೇಕು’ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ 80ನೇ ಬಾರಿ ರಕ್ತದಾನ ಮಾಡಿದರು. ಅವರ ಜೊತೆಗೆ ಶ್ರೀಧರ ಜೋಶಿ, ವಿನೋದಕುಮಾರ ಪಟ್ವಾ ಅವರು ರಕ್ತದಾನ ಮಾಡಿದರು.
ಸ್ವರ್ಣಾ ಗ್ರೂಪ್ನ ಎಂ.ಡಿ ವಿ.ಎಸ್.ವಿ ಪ್ರಸಾದ, ಗೋವಿಂದ ಜೋಶಿ, ಎಸ್.ಡಿ.ಬೆಲ್ಲದ, ವೀರೆಂದ್ರ ಛೇಡಾ, ಗುರುಬನ್ನಿಕೊಪ್ಪ ಇದ್ದರು.
ಕೆಎಲ್ಇ ನರ್ಸಿಂಗ್ ಕಾಲೇಜ್, ಭಾವದೀಪ ಸ್ಕೂಲ್, ಚಿನ್ಮಯ ಸ್ಕೂಲ್, ಕೇಶವ ವಿದ್ಯಾಕೇಂದ್ರ, ಆಯುರ್ವೇದ ಮಹಾವಿದ್ಯಾಲಯ, ಕಿಮ್ಸ್, ಅಶೋಕ ನರ್ಸಿಂಗ್ ಕಾಲೇಜ್, ಶಕುಂತಲಾ ನರ್ಸಿಂಗ್ ಕಾಲೇಜ್ ಸೇರಿದಂತೆ ವಿವಿಧ ಶಾಲಾ– ಕಾಲೇಜಿನ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.
ರಕ್ತಕೇಂದ್ರದಿಂದ ಆರಂಭವಾದ ನಡಿಗೆ ಚನ್ನಮ್ಮ ಸರ್ಕಲ್, ಹೆಡ್ ಪೋಸ್ಟ್ ಆಫೀಸ್ವರೆಗೆ ಹೋಗಿ ನಂತರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಂದು ಅಲ್ಲಿಂದ ಪುನಃ ರಕ್ತಕೇಂದ್ರಕ್ಕೆ ಬಂದು ಮುಕ್ತಾಯವಾಯಿತು. ವಿದ್ಯಾರ್ಥಿಗಳು ರಕ್ತದಾನದ ಮಹತ್ವ ಸಾರುವ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
Highlights - ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಆಯೋಜನೆ ಜನ್ಮದಿನದಂದು ರಕ್ತದಾನ ಮಾಡಲು ಸಲಹೆ ವಿವಿಧ ಶಾಲಾ–ಕಾಲೇಜಿನ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.