ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 16 ಜನರನ್ನು ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಬುಧವಾರ ಸಂಜೆ 5 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 191ನೇ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಮುತ್ತಣ್ಣನವರ ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ’ಶಾಸಕ ಜಗದೀಶ ಶೆಟ್ಟರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮನಸೂರು ಮಠದ ರೇವಣಸಿದ್ದೇಶ್ವರ ಮಹಾಸಂಸ್ಥಾನ ಪೀಠದ ಬಸವರಾಜ ದೇವರು ಸಾನ್ನಿಧ್ಯ ವಹಿಸುವರು. ಶಾಸಕರಾದ ಕುಸುಮಾವತಿ ಶಿವಳ್ಳಿ, ಅರವಿಂದ ಬೆಲ್ಲದ ಹಾಗೂ ಪ್ರಸಾದ ಅಬ್ಬಯ್ಯ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
‘ವೇದಿಕೆಗೆ ಪುನೀತ್ ರಾಜಕುಮಾರ್ ಹೆಸರು ಇಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ ಬೆಳಗಾವಿ ವಿಧಾನಸೌಧದ ಮುಂದೆ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಆದಷ್ಟು ಬೇಗನೆ ಸ್ಥಾಪಿಸಬೇಕು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣನ ಹೆಸರಿಡಬೇಕು’ ಎಂದು ಅವರು ಆಗ್ರಹಿಸಿದರು.
ಪ್ರಶಸ್ತಿಗೆ ಭಾಜನರಾದವರು: ಮಂಜುನಾಥ ಹಾರೊಗೇರಿ, ಮಂಜುನಾಥ ಚವ್ಹಾಣ (ಸಮಾಜ ಸೇವೆ), ಅಡಿವೆಪ್ಪ ಬಡಿಗೇರ, ಉಮೇಶ ಬಂಗಾರಿ, ಮಂಜುನಾಥ ಹಾಲಹರವ (ಪೊಲೀಸ್ ಇಲಾಖೆ), ಶರೀಫಸಾಬ ನದಾಫ್ (ಸಾರಿಗೆ ಇಲಾಖೆ), ಡಾ. ಸಿದ್ಧಗಂಗಾ, ಡಾ. ಮಲ್ಲಿಕಾರ್ಜುನ ಸ್ವಾಮಿ, ಡಾ. ಕವಿತಾ ಎಸ್. ಕೋರೆ (ವೈದ್ಯಕೀಯ), ಮಲ್ಲು ಬೆಳಗಲಿ, ಸುಪ್ರಿತಾ ಬಡಿಗೇರ (ಸಂಗೀತ), ಸಂಜು ಅವರಾಧಿ, ಸಂಜೀವ ಸಾಹೊಜಿ (ಸೈನ್ಯ), ಗುರುರಾಜ ಹೂಗಾರ, ಜಗದೀಶ ಬುರ್ಲಬುಡ್ಡಿ ಹಾಗೂ ಸಂತೋಷ ಇಳಿಗೇರಿ (ಮಾಧ್ಯಮ).
ಕುರುಬ ಸಮಾಜದ ಮುಖಂಡರಾದ ಎಚ್.ಎಫ್. ಮುದಕಣ್ಣವರ, ಶಿವಾನಂದ ಜೋಗಿನ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ತಾಲೂರು, ಪದಾಧಿಕಾರಿಗಳಾದ ರಾಘವೇಂದ್ರ ಕುರಿತು, ವಿನಾಯಕ ನಲವಡಿ, ಸಿದ್ದಣ್ಣ ಜಟ್ಟಟೆಪ್ಪನವರ ಹಾಗೂ ಬಾಳಮ್ಮ ಜಂಗಿನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.