ಹುಬ್ಬಳ್ಳಿ: ‘ಕೆವಿಎನ್ ಸಂಸ್ಥೆ ನಿರ್ಮಾಣದ ಬೈ ಟು ಲವ್ ಚಿತ್ರ ರಾಜ್ಯದಾದ್ಯಂತ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ಚಿತ್ರ ನಿರ್ದೇಶಕ ಹರಿ ಸಂತೋಷ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಪೂರ್ಣ ಕೌಟುಂಬಿಕ ಚಿತ್ರ ಇದಾಗಿದ್ದು, ಎರಡೂವರೆ ಗಂಟೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಿಂದಿನ ಪೀಳಿಗೆಗೆ ಹಾಗೂ ಇಂದಿನ ಪೀಳಿಗೆ ಜನರಿಗೆ ಹೊಂದಾಣಿಕೆಯಲ್ಲಿ ಗೊಂದಲಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ನಿಭಾಯಿಸುವುದು ಹೇಗೆ ಎನ್ನುವುದು ಚಿತ್ರದ ಸಾರಾಂಶ. ಚಿತ್ರದಲ್ಲಿನ ಭಾವನಾತ್ಮಕ ಸಂಭಾಷಣೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದರು.
‘ಬೆಂಗಳೂರು ಸಂಪೂರ್ಣ ಡಿಜಿಟಲ್ ಆಗಿದ್ದರಿಂದ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಿಸುವವರ ಸಂಖ್ಯೆ ಕಡಿಮೆ. ಆದರೆ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗಗಳಲ್ಲಿನ ಪ್ರೇಕ್ಷಕರು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬರುತ್ತಾರೆ. ಆ ಮೂಲಕ ಕಲಾವಿದರಿಗೆ ಪ್ರೋತ್ಸಾಹ ತುಂಬಿ, ಸಿನಿಮಾ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರೇಕ್ಷಕ ಕಥೆ ಬಿಟ್ಟು ಹೊರಗೆ ಹೋಗಬಾರದು ಎಂದು ಅನಗತ್ಯ ಹಾಡುಗಳಿಗೆ ಅವಕಾಶ ನೀಡಿಲ್ಲ. ಚಿತ್ರಕಥೆಗೆ ಪೂರಕವಾದ ನಾಲ್ಕು ಹಾಡುಗಳಿವೆ’ ಎಂದು ಹೇಳಿದರು.
ನಾಯಕ ನಟ ಧನ್ವೀರ್, ‘ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಈ ಚಿತ್ರಕ್ಕೆ ಇಷ್ಟೊಂದು ಬೆಂಬಲ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಎಲ್ಲೆಡೆ ಚಿತ್ರ ಮಂದಿರ ಹೌಸ್ ಫುಲ್ ಆಗುತ್ತಿದೆ. ಇಂದಿನ ಪೀಳಿಗೆಗಳ ಯುವ ಮನಸ್ಸಿನ ತೊಳಲಾಟವನ್ನು ಚಿತ್ರದಲ್ಲಿ ತಿಳಿಸಿದ್ದೇವೆ’ ಎಂದರು.
ನಾಯಕಿ ನಟಿ ಶ್ರೀಲೀಲಾ ಇದ್ದರು.
‘ಸಾಕ್ಷಿ ಸಮೇತ ಸ್ಪಷ್ಟಪಡಿಸುತ್ತೇನೆ’
ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ನಟ ಧನ್ವೀರ್, ‘ಒಂದಷ್ಟು ಗಲಾಟೆ ನಡೆದಿವೆ. ಕೆಲವು ಕಿಡಿಗೇಡಿಗಳು ಕುತಂತ್ರ ನಡೆಸಿ ಹೀಗೆ ಮಾಡುತ್ತಿದ್ದಾರೆ. ಆರಂಭದಿಂದ ಏನೇನು ಮಾಡಿಕೊಂಡು ಬಂದಿದ್ದರು ಎನ್ನುವ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಸದ್ಯ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೇನೆ. ಉತ್ತರ ಕರ್ನಾಟಕ ಪ್ರವಾಸ ಮುಗಿಸಿ, ಬೆಂಗಳೂರಿಗೆ ತೆರಳುತ್ತೇನೆ. ಅಲ್ಲಿ ಸುದ್ದಿಗೋಷ್ಠಿ ನಡೆಸಿ ಸಾಕ್ಷಿ ಸಮೇತ ಸ್ಪಷ್ಟಪಡಿಸುತ್ತೇನೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.