ಹುಬ್ಬಳ್ಳಿ: ಎಲ್ಲ ಕಾಯಿಲೆಗಳಂತೆ ಕ್ಯಾನ್ಸರ್ ಕೂಡ ಒಂದು. ತಂಬಾಕು, ಮದ್ಯಪಾನ ಹಾಗೂ ಇಂದಿನ ಆಹಾರ ಪದ್ಧತಿ ಕ್ಯಾನ್ಸರ್ ಬರಲು ಮುಖ್ಯ ಕಾರಣಗಳಾಗಿವೆ ಎಂದು ನವನಗರದ ಕ್ಯಾನ್ಸರ್ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಂಜುಳಾ ಹುಗ್ಗಿ ಹೇಳಿದರು.
ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯೂತ್ ರೆಡ್ ಕ್ರಾಸ್ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರಲ್ಲಿ ಕ್ಯಾನ್ಸರ್ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಅವುಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಹೋಗಲಾಡಿಸಬೇಕು ಎಂದರು.
ಕ್ಯಾನ್ಸರ್ ಆಸ್ಪತ್ರೆಯ ಡಾ.ಉಮೇಶ್ ಹಳ್ಳಿಕೇರಿ ಮಾತನಾಡಿ, ತಂಬಾಕು ಜೀವನವನ್ನು ಕೊಲ್ಲುತ್ತದೆ. ಅದು ನಮ್ಮನ್ನೆಲ್ಲ ಕೊಲ್ಲುವ ಮೊದಲೇ ನಾವೆಲ್ಲರೂ ಕೂಡಿ ತಂಬಾಕನ್ನು ಸುಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಎನ್. ಡಿ. ಶೇಖ್ ಮಾತನಾಡಿ, ಇಂದಿನ ಮಕ್ಕಳು ತಂದೆ-ತಾಯಿಗಳಿಗಿಂತ ಶಿಕ್ಷಕರ ಮಾತುಗಳಿಗೆ ಹೆಚ್ಚು ಬೆಲೆ ಕೊಡುವ ಕಾರಣ ಶಿಕ್ಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕ ಡಾ.ಜಿ.ಎಂ. ಸುಣಗಾರ, ಪ್ರಾಧ್ಯಾಪಕರಾದ ಡಾ.ಆರ್.ಎಸ್. ಪಾಟೀಲ, ಡಾ.ಪಿ.ಎಸ್. ಹೆಗಡೆ, ಡಾ.ಎ.ಜೆ. ಪಾಟೀಲ, ಡಾ.ಜೆ.ಸಿ. ಹಿರೇಮಠ, ಡಾ.ಎಂ.ಪಿ. ಚಳಗೇರಿ, ಡಾ.ಎಚ್.ಆರ್. ಕುರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.