ADVERTISEMENT

ಜನರಿಗೆ ಎಲ್ಲೂ ಹೋಗಬೇಡಿ ಎಂದು ಹೇಳಲಾಗದು, ಎಚ್ಚರವಹಿಸಬೇಕು; ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 17:09 IST
Last Updated 8 ಸೆಪ್ಟೆಂಬರ್ 2021, 17:09 IST
   

ಧಾರವಾಡ: ‘ರಾಜ್ಯದಲ್ಲಿ ಯಾರನ್ನು ಎಲ್ಲಿಯೂ ಹೋಗಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅವರವರೇ ಎಚ್ಚರಿಕೆ ವಹಿಸಬೇಕು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೈಸೂರು ಘಟನೆ ಕುರಿತು ಪ್ರತಿಕ್ರಿಯಿಸಿದರು.

ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆಯನ್ನು ಬುಧವಾರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪಾಯದ ಸ್ಥಳ ಕುರಿತು ಮಾಹಿತಿ ನೀಡಿದರೆ ಪೊಲೀಸರು ಗಸ್ತು ಹೆಚ್ಚಿಸುತ್ತಾರೆ. ಸದ್ಯ ಪೊಲೀಸ್ ಠಾಣೆಗೂ ಹೋಗುವ ಅಗತ್ಯವೂ ಇಲ್ಲ. ತೊಂದರೆ ಎದುರಾದರೆ 112ಕ್ಕೆ ಕರೆ ಮಾಡಬಹುದು’ ಎಂದರು.

ಮುಖ್ಯಮಂತ್ರಿ ಪದೇಪದೇ ದೆಹಲಿ ಹೋಗುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಸಿದ ಅವರು, ‘ಕೆಲವು ಕಡತಗಳು ಮುಂದಕ್ಕೆ ಹೋಗದೆ ನಿಂತಲ್ಲೇ ನಿಂತಿರುತ್ತವೆ. ಅವುಗಳ ಕೆಲಸಕ್ಕೆ ಹೋಗುತ್ತಾರೆ ಅಷ್ಟೇ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹುಬ್ಬಳ್ಳಿ ಭೇಟಿ ಸಂದರ್ಭದಲ್ಲಿ ಒಳ್ಳೆಯ ಹಾಗೂ ಸಭ್ಯ ಮುಖ್ಯಮಂತ್ರಿ ಎಂದು ಬೊಮ್ಮಾಯಿ ಅವರನ್ನು ಹೊಗಳಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಆಡಳಿತ ಉತ್ತಮವಾಗಿ ಸಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.