ಧಾರವಾಡ: ‘ನನ್ನ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎಂಬ ವಿಷಯ ಕೇಳಿ ಅದನ್ನು ನನಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಚಂದ್ರಶೇಖರ ಇಂಡಿ (ಚಂದು ಮಾಮ) ಶಕುನಿ ಪಾತ್ರ ನಿರ್ವಹಿಸಿದ್ದಾರೆ’ ಎಂದು ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಆರೋಪಿಸಿದರು.
ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ವಿಚಾರಣೆ ಎದುರಿಸಿ ಹೊರಬಂದ ಅವರು ಸುದ್ದಿಗಾರರೊಂದಿ ಮಾತನಾಡಿ, ಬಂಧಿತ ಚಂದ್ರಶೇಖ ಇಂಡಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು.
‘ಚಂದ್ರಶೇಖರ ಅವರನ್ನು ನಾವು ಚಂದು ಮಾಮ ಎಂದೇ ಕರೆಯುತ್ತೇವೆ. ವಿನಯ ಕುಲಕರ್ಣಿ ಹಾಗೂ ಚಂದು ಮಾಮ ಅವರೊಂದಿಗೆ ನಾವು ಹಲವು ಬಾರಿ ಕುಳಿತು ಊಟ ಮಾಡಿದ್ದೇವೆ. ಅದೇ ಊಟದಲ್ಲಿ ವಿಷ ಬೆರೆಸಿದ್ದರೂ ಸಂತೋಷವಾಗಿ ತಿನ್ನುತ್ತಿದ್ದೆವು. ಈ ವಿಷಯದಲ್ಲಿ ಚಂದು ಮಾಮಾ ‘ಶಕುನಿ’ ಪಾತ್ರ ನಿರ್ವಹಿಸಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.
‘ಈ ಪ್ರಕರಣದಲ್ಲಿ ಚಂದ್ರಶೇಖರ ಇಂಡಿ ಎಂಬ ವ್ಯಕ್ತಿ ಬಂದು ಎಲ್ಲರ ಬದುಕನ್ನೇ ಹಾಳು ಮಾಡಿದ. ಈ ಬಗ್ಗೆ ದೂರು ನೀಡುವ ಬಗ್ಗೆ ನಮ್ಮ ವಕೀಲರ ಬಳಿ ಮಾತನಾಡುತ್ತೇನೆ. ಕೆಲವರಿಗೆ ಹಲವು ದೌರ್ಬಲ್ಯ ಇರುತ್ತವೆ. ನಾವು ಭಾವನೆಗಳೊಂದಿಗೆ ಬದುಕುವ ದೌರ್ಬಲ್ಯದವರಾಗಿದ್ದೇನೆ. ಕೆಲವರು ಚಾಡಿ ಕೇಳುವ ದೌರ್ಬಲ್ಯ ಹೊಂದಿರುತ್ತಾರೆ. ಈ ಚಾಡಿ ಕೇಳಿದ್ದರಿಂದಲೇ ಹೀಗೆ ಆಗಿರಬಹುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.