ಹುಬ್ಬಳ್ಳಿ: ಚುರುಕಾಗಿ ಕಾಯಿಗಳನ್ನು ಮುನ್ನಡೆಸಿದ ಪ್ರಥಮ್ ಎಸ್. ಸಹಸ್ರಬುದ್ಧೆ, ಹುಬ್ಬಳ್ಳಿ ಚೆಸ್ ಅಕಾಡೆಮಿ ಕರ್ನಾಟಕ ಚದುರಂಗ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚೆಸ್ ಟೂರ್ನಿಯಲ್ಲಿ ಅಗ್ರಸ್ಥಾನ ಸಂಪಾದಿಸಿದರು.
ಬೈರಿದೇವರಕೊಪ್ಪದ ಸದಾಶಿವಾನಂದ ನಗರದ ಆಲ್ ಸೇಂಟ್ಸ್ ಶಾಲೆಯಲ್ಲಿ ಭಾನುವಾರ ನಡೆದ ಟೂರ್ನಿಯಲ್ಲಿ ಪ್ರಥಮ್ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ 4.5 ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದರು.
ಟಿ.ಎಸ್. ನವೀನ ಹಾಗೂ ಸುದರ್ಶನ ಭಟ್ ತಲಾ ನಾಲ್ಕು ಅಂಕಗಳನ್ನು ಗಳಿಸಿ ಕ್ರಮವಾಗಿ ನಂತರದ ಎರಡು ಸ್ಥಾನಗಳನ್ನು ಪಡೆದರು. ತಲಾ 3.5 ಅಂಕಗಳನ್ನು ಕಲೆಹಾಕಿದ್ದ ಸಹನಾ ಪಿ. ಅರಳಿಕಟ್ಟಿ ನಾಲ್ಕು ಹಾಗೂ ಗಗನ ಆರ್. ಕರ್ಜಗಿ ಐದನೇ ಸ್ಥಾನ ಸಂಪಾದಿಸಿದರು.
1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕೆ.ಎಚ್. ತ್ರಿಮುಖ ಐದು ಪಾಯಿಂಟ್ಸ್ ಕಲೆಹಾಕಿ ಮೊದಲಿಗರಾದರು. ನಂತರದ ನಾಲ್ಕು ಸ್ಥಾನಗಳನ್ನು ಕ್ರಮವಾಗಿ ಜಯರಾಮ ವಿನಾಯಕ ಭಟ್ (4.5), ಸಮರ್ಥ ಮಹೇಶ ಪ್ರಸಾದ (4), ಕೆ.ಎಸ್. ಯತಿಕ್ (4) ಮತ್ತು ಅಭಿನೀತ್ ಭಟ್ (4) ಗಳಿಸಿದರು.
5ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಜರುಗಿದ ಪೈಪೋಟಿಯಲ್ಲಿ ಶ್ರೀಶ ಎಸ್. ಅಮೀನ್ (5 ಪಾಯಿಂಟ್ಸ್) ಅಗ್ರಸ್ಥಾನ ಸಂಪಾದಿಸಿದರು. ಕ್ಷಿತಿಜಾ ಎಂ. ಯತ್ನಟ್ಟಿ, ಶಿವಕುಮಾರ ಪಿ. ಅರಳಿಕಟ್ಟಿ, ಅಂಕಿತ್ ಕುಮಾರ ಝಾ ಮತ್ತು ಧನಂಜಯ ಪಿ. ಜೋಶಿ ತಲಾ ನಾಲ್ಕು ಪಾಯಿಂಟ್ಸ್ ಕಲೆಹಾಕಿ ಕ್ರಮವಾಗಿ ನಂತರದ ನಾಲ್ಕು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ಹುಬ್ಬಳ್ಳಿ, ಧಾರವಾಡ, ಶಿರಸಿ, ಬಾಗಲಕೋಟೆ ಗದಗ ಮತ್ತು ಹೊಸಪೇಟೆಯಿಂದ ಒಟ್ಟು 120 ಸ್ಪರ್ಧಿಗಳು ಭಾಗವಹಿಸಿದ್ದರು. ಆಲ್ ಸೈಂಟ್ಸ್ ಶಾಲೆಯ ಚೇರ್ಮನ್ ಫಿರೋಜ್ ಅಹ್ಮದ್, ನೆಹರೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಮಹಾಂತೇಶ ಯತ್ನಟ್ಟಿ, ಡಾ. ರಾಜ ನಾರಾಯಣ ಮತ್ತು ಅಕಾಡೆಮಿಯ ಸಂಸ್ಥಾಪಕ ಕೆ.ವಿ. ಶ್ರೀಪಾದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.