ಧಾರವಾಡ: ನಾಲ್ಕು ತಿಂಗಳ ಹಿಂದೆ ಗಂಡು ಮಗು ಮಾರಾಟಕ್ಕೆ ಸಹಕರಿಸಿದ್ದ ಆರೋಪದ ಮೇಲೆ ನಾಲ್ಕು ಜನ ಮಧ್ಯವರ್ತಿಗಳು ಹಾಗೂ ಮಗು ಖರೀದಿಸಿದ ದಂಪತಿಯನ್ನು ವಿದ್ಯಾಗಿರಿ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಮಗು ಮಾರಾಟಕ್ಕೆ ಸಹಕರಿಸಿದಭಾರತಿ ಮಂಜುನಾಥ ವಾಲ್ಮೀಕಿ, ರಮೇಶ ಮಂಜುನಾಥ ವಾಲ್ಮೀಕಿ, ರವಿ ಭೀಮಸೇನ ಹೆಗಡೆ ಹಾಗೂ ವಿನಾಯಕ ಅರ್ಜುನ ಮಾದರ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಗು ಖರೀದಿಸಿದ ಆರೋಪದ ಮೇಲೆವಿಜಯ ಬಸಪ್ಪ ನೆಗಳೂರ ಮತ್ತು ಚಿತ್ರಾ ವಿಜಯ ನೆಗಳೂರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಲ ತೀರಿಸಲು ಮಾರಾಟ: ಮಗುವಿನ ಪಾಲಕರು ಬಡ್ಡಿ ವ್ಯವಹಾರ ಮಾಡುತ್ತಿದ್ದ ವ್ಯಕ್ತಿಯಿಂದ ₹ 50 ಸಾವಿರ ಸಾಲ ಮಾಡಿದ್ದರು. ಅದು ಬಡ್ಡಿ ಸೇರಿ ₹ 1.50 ಲಕ್ಷದಷ್ಟಾಗಿತ್ತು. ಸಾಲ ಮರುಪಾವತಿ ಮಾಡಲು ಹಣ ಇಲ್ಲದ್ದರಿಂದ ಪಾಲಕರು, ತಮ್ಮ ಒಂದು ತಿಂಗಳ 10 ದಿನದ ಮಗುವನ್ನು ಆರೋಪಿಗಳ ಸಹಾಯ ದಿಂದ ₹ 2.50 ಲಕ್ಷಕ್ಕೆ ಮಾರಾಟ ಮಾಡಿ ದ್ದರು. ನಂತರ ಆ ಹಣವನ್ನು ನೀಡಿ, ಸಾಲ ತೀರಿಸಿದ್ದರು.
ಮಗುವಿನ ಬಗ್ಗೆ ಮಮತೆ ಉಂಟಾಗಿ ಪಾಲಕರು, ತಮ್ಮ ಮಗುವನ್ನು ಮರಳಿ ಕೊಡಿಸುವಂತೆ ವಿದ್ಯಾಗಿರಿ ಪೊಲೀಸ್ ಠಾಣೆಗೆ ಮೊರೆ ಇಟ್ಟರು. ಪೊಲೀಸ್ ಉಪಆಯುಕ್ತ ರಾಮರಾಜನ್,ಆರ್.ಬಿ. ಬಸರಗಿ ಮತ್ತು ಎಸಿಪಿ ಜಿ. ಅನುಷಾ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ವಿದ್ಯಾಗಿರಿ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಮಗುವನ್ನು ರಕ್ಷಣೆ ಮಾಡಿದರು.ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಸಂಪೂರ್ಣ ತನಿಖೆ ನಂತರ ಪಾಲಕರಿಗೆ ಹಸ್ತಾಂತರಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.