ಹುಬ್ಬಳ್ಳಿ: ಬೇಸಿಗೆ ರಜೆಯಲ್ಲಿ ನಡೆದ ಮಕ್ಕಳ ನಾಟಕ ತರಬೇತಿ ಶಿಬಿರದಲ್ಲಿ ಕಲಿತ ಎರಡು ನಾಟಕಗಳ ಪ್ರದರ್ಶನ ಮೇ 14ರಂದು ಬೆಳಿಗ್ಗೆ 10.30ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಜರುಗಲಿದೆ.
ಅಭಿನಯ ಲೋಕ, ಧಾರವಾಡದ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಮತ್ತು ಹುಬ್ಬಳ್ಳಿಯ ಕ್ಷಮತಾ ಸೇವಾ ಸಂಸ್ಥೆ ಸಹಯೋಗದಲ್ಲಿ ‘ಚಿಣ್ಣರ ರಂಗ ಮೇಳ’ ಜರುಗಲಿದೆ. ಡಾ. ಚಂದ್ರಶೇಖರ ಕಂಬಾರ ರಚಿತ ‘ಅಲಿಬಾಬಾ ಮತ್ತು ನಲವತ್ತು ಕಳ್ಳರು’ (ನಿರ್ದೇಶನ: ವಿಶ್ವನಾಥ ಕುಲಕರ್ಣಿ), ‘ಕಿಟ್ಟಿ ಕಥೆ’ (ನಿರ್ದೇಶನ: ಪದ್ಮಾ ಕೊಡಗು) ನಾಟಕಗಳು ಪ್ರದರ್ಶನಗೊಳ್ಳಲಿವೆ. ಹರೀಶ ಕುಲಕರ್ಣಿ ಸಂಗೀತ ನೀಡಲಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವಣ್ಣ ಅದರಗುಂಚಿ, ಉದ್ಯಮಿ ಗೋವಿಂದ ಜೋಶಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಎಂ.ಜಿ. ಮಳಗಿ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಆಕ್ಸ್ಫರ್ಡ್ ಕಾಲೇಜಿನ ಚೇರ್ಮನ್ ವಸಂತ ಹೊರಟ್ಟಿ, ವಿವೇಕಾನಂದ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಗುರುರಾಜ ಕುಲಕರ್ಣಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.