ADVERTISEMENT

ಆಸಕ್ತಿ ಇರುವ ವಿಷಯ ಆಯ್ದುಕೊಳ್ಳಿ :ಶೃತಿ ಮಲ್ಲಪ್ಪಗೌಡರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 9:47 IST
Last Updated 26 ಡಿಸೆಂಬರ್ 2019, 9:47 IST
ಶೃತಿ ಮಲ್ಲಪ್ಪಗೌಡರ
ಶೃತಿ ಮಲ್ಲಪ್ಪಗೌಡರ   

ಹುಬ್ಬಳ್ಳಿ: ಕಲಘಟಗಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಸಿ. ಮಲ್ಲಪ್ಪಗೌಡರ ಅವರ ಪುತ್ರಿ ಶ್ರುತಿ, ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಹಶೀಲ್ದಾರ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ.

ನಗರದ ಗಣೇಶಪೇಟೆಯ ಲಿಮೆ ಚಾಳದ ನಿವಾಸಿ ಆಗಿರುವ ಅವರು, ಗದಗ ರಸ್ತೆಯ ಸೇಂಟ್‌ ಆ್ಯಂಡ್ರೂ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಓದಿದ್ದಾರೆ. ಅಕ್ಷಯ ಕಾಲೊನಿಯಲ್ಲಿರುವ ಚೇತನಾ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಮತ್ತು ಪದವಿ ಪಡೆದಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್‌ ಆಗಬೇಕೆಂದುಕೊಂಡಿದ್ದ ಶ್ರುತಿ, ದೆಹಲಿಯ ವಾಜಿರಾಮ್‌ ಆ್ಯಂಡ್‌ ರವಿ ಸಂಸ್ಥೆಯಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದರು. ಅದಕ್ಕೂ ಪೂರ್ವ 2014ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೆ, ಆಯ್ಕೆಯಾಗಿರಲಿಲ್ಲ. ಈಗ ಯಶಸ್ವಿಯಾಗಿದ್ದಾರೆ. ಮಾನವಶಾಸ್ತ್ರ ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು.

ADVERTISEMENT

‘ಬಹುತೇಕರಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಎಂದರೆ ಸಾಕಷ್ಟು ವಿಷಯಗಳನ್ನು ಓದಿಕೊಂಡಿರಬೇಕು ಎನ್ನುವ ಮನಸ್ಥಿತಿಯಿದೆ. ಅಂತಹ ಗೊಂದಲಗಳಿಗೆ ಅವಕಾಶ ನೀಡದೆ, ಯಾವ ವಿಷಯದಲ್ಲಿ ಆಸಕ್ತಿಯಿದೆಯೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಆಗ ಅಭ್ಯಾಸ ಮಾಡುವುದು ಸುಲಭವಾಗುತ್ತದೆ. ಮಾನವಶಾಸ್ತ್ರದಲ್ಲಿ ಆಸಕ್ತಿ ಇದ್ದಿದ್ದರಿಂದ, ಅದನ್ನೇ ಆಯ್ಕೆ ಮಾಡಿಕೊಂಡಿದ್ದೆ. ಅದರ ಜೊತೆಗೆ ಇತಿಹಾಸ, ಸಾಮಾನ್ಯ ಜ್ಞಾನ ವಿಷಯಕ್ಕೂ ಹೆಚ್ಚಿನ ಒತ್ತು ನೀಡಿದ್ದೆ’ ಎಂದು ಶ್ರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶ್ರುತಿ ಅವರ ತಾಯಿ ಸುನಂದಾ ಹೊಸಪೇಟೆ ಅವರು ರಂಗ ಕಲಾವಿದರು. ಸಾಕಷ್ಟು ನಾಟಕದಲ್ಲಿ ಅಭಿನಯಿಸಿರುವ ಅವರು, ಸಿನೆಮಾ ಹಾಗೂ ಕಿರುತೆರೆಗಳಲ್ಲಿಯೂ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.