ಹುಬ್ಬಳ್ಳಿ: ನಗರದ ಬಿವಿಬಿ ಕಾಲೇಜಿನ ಎದುರಿನ ಕಲ್ಪವೃಕ್ಷ ಅಪಾರ್ಟ್ಮೆಂಟ್ ಎದುರು ಬಿದ್ದಿದ್ದ ಕಸದ ರಾಶಿಯನ್ನು ಪಾಲಿಕೆ ಸಿಬ್ಬಂದಿ ಗುರುವಾರ ಬೆಳಿಗ್ಗೆ ಸ್ವಚ್ಛಗೊಳಿಸಿದರು.
ವಿದ್ಯಾನಗರದ ಈ ಅಪಾರ್ಟ್ಮೆಂಟ್ ಬಳಿ ಹಲವು ತಿಂಗಳಿಂದ ಕಸದ ರಾಶಿ ಇತ್ತು. ಕಸ ತೆಗೆಯುವಂತೆ ಸ್ಥಳೀಯರು ಮಾಡಿದ್ದ ಮನವಿಗೆ ಪಾಲಿಕೆ ಸ್ಪಂದಿಸಿರಲಿಲ್ಲ. ಇದರಿಂದ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಜನರಿಗೆ ಡೆಂಗಿ ಹಾಗೂ ಚಿಕೂನ್ ಗುನ್ಯಾ ಭೀತಿ ಎದುರಾಗಿತ್ತು. ಈ ಕುರಿತು ಪ್ರಜಾವಾಣಿ ಗುರುವಾರ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತ ಪಾಲಿಕೆ ಸಿಬ್ಬಂದಿ ಕಸ ಸ್ವಚ್ಛಗೊಳಿಸಿದರು. ಅಪಾರ್ಟ್ಮೆಂಟ್ ಸುತ್ತಲೂ ತಳ್ಳುಗಾಡಿ ಅಂಗಡಿಗಳಿವೆ. ಅಂಗಡಿಯವರು ದಿನ ಕಸ ಹಾಕುತ್ತಿದ್ದರು ಎಂದು ಸ್ಥಳೀಯರು ದೂರಿದ್ದರು.
’ಪಾಲಿಕೆಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಪ್ರಜಾವಾಣಿಯಲ್ಲಿ ವರದಿ ಪ್ರಕಟಿಸಿದ ಬಳಿಕ ಸಿಬ್ಬಂದಿ ಕಸ ಸ್ವಚ್ಛಗೊಳಿಸಿದರು’ ಎಂದು ಅಪಾರ್ಟ್ಮೆಂಟ್ ನಿವಾಸಿ ಬಸವರಾಜ ಮುಳಗುಂದ ಹೇಳಿದರು.
‘ಸಾಕಷ್ಟು ಜನರಿಗೆ ಅನಾರೋಗ್ಯ ಕಾಡುತ್ತಿರುವುದರಿಂದ ಸ್ವಚ್ಛತೆಗೆ ಒತ್ತು ನೀಡುವಂತೆ ಆಯುಕ್ತರು ಸೂಚಿಸಿದ್ದಾರೆ. ಆದ್ದರಿಂದ ಎಲ್ಲ ಕಡೆ ಸ್ವಚ್ಛತೆ ನಿರ್ವಹಣೆ ಮಾಡಲಾಗುತ್ತಿದೆ. ಎಲ್ಲಿಯಾದರೂ ಕಸ ಉಳಿದಿದ್ದರೆ ವಲಯ ಕಚೇರಿಗೆ ಪೋನ್ ಮಾಡಿ ಹೇಳಿದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ವಲಯ 5ರ ಆರೋಗ್ಯ ನಿರೀಕ್ಷಕ ಮಹಾಂತೇಶ ನಿಡುವಣಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.