ಹುಬ್ಬಳ್ಳಿ: ರೈತರ ಸಾಲ ಮನ್ನಾ ಆಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಾರೆ. ಆದರೆ ಈ ವರೆಗೆ ಯಾವೊಬ್ಬ ರೈತನ ಸಾಲ ಮನ್ನಾ ಆಗಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕುಂದಗೋಳ ತಾಲ್ಲೂಕಿನ ದೇವನೂರ, ಹಂಚಿನಾಳ ಗ್ರಾಮಗಳಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಪ್ರಚಾರ ನಡೆಸಿ ಮಾತನಾಡಿದರು. ಮಂಡ್ಯ, ಹಾಸನ ರೈತರ ಸಾಲ ಮನ್ನಾ ಮಾಡಿ ಋಣಮುಕ್ತ ಪತ್ರ ನೀಡಿರಬಹುದು. ಆದರೆ ಜಿಲ್ಲೆಗಳಲ್ಲಿ ಇದರ ಲಾಭ ರೈತರಿಗೆ ಸಿಕ್ಕಿಲ್ಲ ಎಂದರು. ನಿಮಗೇನಾದರೂ ಸಾಲ ಮನ್ನಾ ಆಗಿದೆಯೇ ಎಂದು ಅವರು ಜನರನ್ನು ಪ್ರಶ್ನಿಸಿದರು. ಇಲ್ಲ ಎಂಬ ಉತ್ತರವನ್ನು ಜನ ನೀಡಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ದುಡಿಯಲು ಹುಬ್ಬಳ್ಳಿಯಲ್ಲಿ ಮನೆ ಮಾಡುತ್ತೇನೆ ಎಂದರು. ಆದರೆ ಈಗ ಮನೆ ಖಾಲಿ ಮಾಡಿದ್ದಾರೆ. ಮನೆಯೂ ಇಲ್ಲ. ಅಭಿವೃದ್ಧಿಯೂ ಇಲ್ಲ. ಕಾಂಗ್ರೆಸ್ ಜೊತೆ ಸೇರಿ ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬಂದಿರುವ ಕುಮಾರಸ್ವಾಮಿ, ಆ ಪಕ್ಷದ ಎಲ್ಲ ಪಾಪಗಳಲ್ಲಿ ಭಾಗಿದಾರ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ರೆಸಾರ್ಟ್ನಲ್ಲಿ ಮಲಗಿರುವುದರಿಂದ ಅಧಿಕಾರಿಗಳು ಸಹ ಕೆಲಸ ಮಾಡುತ್ತಿಲ್ಲ. ಪರಿಣಾಮ ರಾಜ್ಯದ ಜನರು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣವನ್ನು ಸಹ ಖರ್ಚು ಮಾಡಿಲ್ಲ ಎಂದರು.
ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಉಚಿತ ಅಕ್ಕಿ ನೀಡಿದ ನಾನು ಚಾಂಪಿಯನ್ ಎಂದು ಸಿದ್ದರಾಮಯ್ಯ ಬೀಗುತ್ತಾರೆ. ಆದರೆ ಕೇಂದ್ರ ಸರ್ಕಾರ ಪ್ರತಿ ವರ್ಷ 1.67 ಲಕ್ಷ ಟನ್ ಅಕ್ಕಿಯನ್ನು ರಾಜ್ಯಕ್ಕೆ ನೀಡುತ್ತಿದೆ. 57 ಸಾವಿರ ಟನ್ ಗೋಧಿಯನ್ನು ಸಹ ಪೂರೈಕೆ ಮಾಡುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.