ಅಳ್ನಾವರ: ಪ್ರಕೃತಿ ಆರಾಧಕರಾದ ಗಿರಿಜನರ ಬದುಕು ಹಸನಾಗಿಸಲು ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಭರವಸೆ ನೀಡಿದರು.
ಗಿರಿಜನ ರಕ್ಷಣಾ ವೇದಿಕೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ‘ಗಿರಿಜನರು ಸಾಮಾನ್ಯ ಜನರಂತೆ ಬದುಕಬೇಕು. ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು. ಮಕ್ಕಳಿಗೆ ಶಿಕ್ಷಣ ನೀಡಬೇಕು, ಕಲಘಟಗಿ ಕ್ಷೇತ್ರದಲ್ಲಿ ಅರಣ್ಯ ಪ್ರದೇಶದಲ್ಲಿ ವಾಸವಿರುವ ಸ್ಥಳಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಅನುದಾನ ಬಿಡುಗಡೆಯಾಗಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತಮಾಡಿ ‘ಗಿರಿಜನರು ಸಮಾಜದ ಮೂಲಜನರ ಜೊತೆ ಹೊಂದಿಕೊಂಡು ಹೋಗುವ ವಾತಾವರಣ ಸೃಷ್ಟಿಯಾಗಬೇಕು. ವನವಾಸಿ ಹಾಗೂ ಗಿರಿಜನರ ಭಾಷೆ, ಸಂಸ್ಕ್ರತಿ , ವಿಚಾರ ವಿಭಿನ್ನತೆಯಿಂದ ಕೂಡಿದೆ. ಅವರ ಭಾಷೆ, ಸಂಸ್ಕ್ರತಿ, ಆಚಾರ, ವಿಚಾರ ಸಾಕಷ್ಟು ವಿಭಿನ್ನತೆಯಿಂದ ಕೂಡಿದೆ. ಗಿರಿಜನರ ಸಮಸ್ಯೆಗಳಿಗೆ ಬೆಳಕು ಚೆಲ್ಲಲು ಸಮ್ಮೇಳನ ಆಯೋಜಿಸಲಾಗಿದೆ’ ಎಂದರು.
ಸಮಾಜದ ಹಿರಿಯರಾದ ಜಿ. ಕೃಷ್ಣಮೂರ್ತಿ ಮಾತನಾಡಿ ‘ಗಿರಿಜನ ಸಮಾಜದ ಅಭಿವೃದ್ಧಿಗೆ ಸಮಾಜ, ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಗಿರಿಜನರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶ ನಮ್ಮದು. ಜಾತಿಗಣತಿಯಲ್ಲಿ ಸಮಾಜದವರು ಹಿಂದೂ ಎಂದು ಬರೆಯಿಸಬೇಕು. ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ವಿತರಿಸಬೇಕು’ ಎಂದು ಆಗ್ರಹಿಸಿದರು.
ಎಸ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂಎಸ್ಐಎಲ್ ನಿರ್ದೇಶಕ ಶಿವಾಜಿ ಡೊಳ್ಳಿನ, ಪ್ರವೀಣ ಪವಾರ, ಬಾಬು ವಿಠ್ಠಲ ಶಿಂದೆ, ದೊಂಡುಬಾಯಿ ಜೋರೆ, ಉಲ್ಲಾಸ ಫುಂಡೇರ, ವಸಂತ ಕೈಸೆರಿ, ಪ್ರದೀಪ ಗಾವಡೆ, ಜಯಶ್ರೀ, ಪರಪ್ಪ ನಾಯಕ ಇದ್ದರು. ಶಾಂತಿ ಕರಾಂಡೆ ದೇಶ ಭಕ್ತಿ ಗೀತೆ ಹಾಡಿದರು. ಲಕ್ಷ್ಮಿ ಗಾವಡೆ ಸಂಘಡಿಗರು ಪ್ರಾರ್ಥಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.